ಹೊಸದಿಗಂತ ವರದಿ ಭಟ್ಕಳ:
ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನವರಿ 20 ರಂದು ನಡೆಯಲಿರುವ ಮುರ್ಡೇಶ್ವರದ ಮಹಾರಥೋತ್ಸವ ಕಾರ್ಯಕ್ರಮಕ್ಕೆ
ಸರ್ಕಾರದ ಕೋವಿಡ್ ನಿಯಮಗಳ ಪ್ರಕಾರ ಅನುಮತಿ ನೀಡಲಾಗುವುದಿಲ್ಲ ಜಾತ್ರೆ ಕೇವಲ ದೇವಾಲಯದ ಒಳಾಂಗಣದ ಪೂಜೆ ಪುರಸ್ಕಾರಗಳಿಗೆ ಮಾತ್ರ ಸೀಮಿತವಾಗಿರಲಿದೆ ಸಾರ್ವಜನಿಕರು ಮತ್ತು ಭಕ್ತಾದಿಗಳು ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಆಗದಂತೆ ಸಹಕರಿಸಬೇಕು ಎಂದು ಭಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿ ತಿಳಿಸಿದ್ದಾರೆ.
ಮುರ್ಡೇಶ್ವರ ಜಾತ್ರೆಗೆ ಸಂಬಂದಿತ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಜಾತ್ರೆಯಲ್ಲಿ ಯಾವುದೇ ವಿಜ್ರಂಭಣೆಗೆ ಅವಕಾಶ ಇಲ್ಲ, ದೇವಾಲಯದ ಹೊರಾಂಗಣದಲ್ಲಿ ಯಾವುದೇ ರೀತಿಯ ಉತ್ಸವ, ಮೆರವಣಿಗೆ, ಮನರಂಜನಾ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ, ಹಾಗೂ ಹೆಚ್ಚುವರಿ ಅಂಗಡಿ ಮಳಿಗೆಗಳನ್ನು ತೆರೆಯಲು ಸಹ ಅವಕಾಶ ಇಲ್ಲ ಎಂದು ಹೇಳಿದರು.
ಜಾತ್ರೆ ಸಂದರ್ಭದಲ್ಲಿ ಮುರ್ಡೇಶ್ವರದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸಹಾಯಕ ಆಯುಕ್ತೆ ಮಮತಾ ದೇವಿ ಅವರು ಸೂಚನೆ ನೀಡಿದರು.