ದಿಗಂತ ವರದಿ ಕಲಬುರಗಿ:
ಹಿಜಾಬ್ ಮತ್ತು ಕೇಸರಿ ವಿವಾದವು ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಂಚಮಸಾಲಿ ಪೀಠವು ಯಾರ ವಿರುದ್ಧವಾಗಿಯೂ ಪ್ರಾರಂಭವಾಗಿಲ್ಲ. ನಿರಾಣಿ ಹಿತಾಸಕ್ತಿ ಗೆ ಮೂರನೆ ಪೀಠ ಎಂಬ ವಿಚಾರ ಸತ್ಯಕ್ಕೆ ದೂರವಾದ ಮಾತು. ಪಂಚಮಸಾಲಿ ಒಂದು ಮತ್ತು ಎರಡನೇ ಪೀಠ ಪ್ರಾರಂಭದಲ್ಲಿ ನನ್ನ ಕೊಡುಗೆ ಇದೆ ಎಂದು ಹೇಳಿದರು.
ಮೂರನೆ ಪೀಠದ ಬಗ್ಗೆ ಮಾತನಾಡುವವರು, ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ,ಎರಡನೆ ಪೀಠ ಏಕೆ ಹುಟ್ಟಿತು ಎನ್ನುವುದರ ಬಗ್ಗೆ ಆತ್ಮಾವಲೋಕನ ಮಾಡಲಿ ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಟಾಂಗ್ ನೀಡಿದರು.
ಮೂರನೇ ಪೀಠದ ಕಾಯ೯ಕ್ರಮಕ್ಕೆ ಅನೇಕ ಸ್ವಾಮಿಜಿಗಳಿಗೆ ಆಹ್ವಾನ ನೀಡಲಾಗಿದೆ. ಬರುತ್ತಾರೆ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟಿದ್ದು, ಸಂಪುಟ ವಿಸ್ತರಣೆ ಸಿಎಂ ಅವರ ಪರಮಾಧಿಕಾರ ಎಂದರು.