ಹೊಸದಿಗಂತ ಡಿಜಿಟಲ್ ಡೆಸ್ಕ್:
ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡುವುದಕ್ಕೆ ಅವಕಾಶ ನೀಡಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ತೆಲಂಗಾಣ ಸರ್ಕಾರವು ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳ ಮುಸ್ಲಿಂ ಉದ್ಯೋಗಿಗಳಿಗೆ ಕೆಲಸದ ಅವಧಿಯನ್ನು ಕಡಿಮೆ ಮಾಡುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ಚಂದ್ರ ದರ್ಶನದ ಆಧಾರದಲ್ಲಿ ಮಾರ್ಚ್ 1 ಅಥವಾ ಮಾರ್ಚ್ 2 ರಂದು ರಂಜಾನ್ ತಿಂಗಳು ಪ್ರಾರಂಭವಾಗಲಿದೆ. ಅಲ್ಲಿಂದ ಮಾರ್ಚ್ 31, 2025 ರವರೆಗೆ ಜಾರಿಯಲ್ಲಿರುವಂತೆ ಮುಸ್ಲಿಂ ಉದ್ಯೋಗಿಗಳು ಒಂದು ಗಂಟೆ ಮುಂಚಿತವಾಗಿ ಕಚೇರಿಗಳಿಂದ ತೆರಳಬಹುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಅವರು ಆದೇಶ ಹೊರಡಿಸಿದ್ದಾರೆ.
ಆದರಂತೆ ಮುಸ್ಲಿಂ ಉದ್ಯೋಗಿಗಳು ಸಾಮಾನ್ಯವಾಗಿ ಸಂಜೆ 5.00 ಗಂಟೆಗೆ ತೆರಳುವ ಬದಲು ಸಂಜೆ 4.00 ಗಂಟೆಗೆ ಹೊರಡಲು ಅನುವು ಮಾಡಿಕೊಡುತ್ತದೆ. ಈ ಆದೇಶಗಳು ಮುಸ್ಲಿಂ ಶಿಕ್ಷಕರು, ಗುತ್ತಿಗೆ ನೌಕರರು, ಹೊರಗುತ್ತಿಗೆ, ಮಂಡಳಿ ಮತ್ತು ಸಾರ್ವಜನಿಕ ವಲಯದ ಕಾರ್ಮಿಕರಿಗೆ ಅನ್ವಯಿಸುತ್ತವೆ ಎನ್ನಲಾಗಿದೆ. ಏತನ್ಮಧ್ಯೆ ತುರ್ತು ಸಂದರ್ಭದಲ್ಲಿ ಅವರ ಅವಶ್ಯಕತೆ ಇದ್ದರೆ, ಸಂಜೆ 5.00 ಗಂಟೆವರೆಗೂ ಮುಂದುವರೆಯ ಬೇಕೆಂದು ತಿಳಿಸಿದೆ.
‘ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಮುಸ್ಲಿಂ ಸರ್ಕಾರಿ ನೌಕರರು/ಶಿಕ್ಷಕರು/ಗುತ್ತಿಗೆ/ಹೊರಗುತ್ತಿಗೆ/ಮಂಡಳಿಗಳು/ನಿಗಮಗಳು ಮತ್ತು ಸಾರ್ವಜನಿಕ ವಲಯದ ನೌಕರರು ಮಾರ್ಚ್ 2 ರಿಂದ 31 ರವರೆಗೆ (ಎರಡೂ ದಿನಗಳು ಸೇರಿದಂತೆ) ಪವಿತ್ರ ರಂಜಾನ್ ಮಾಸದಲ್ಲಿ ಸಂಜೆ 4 ಗಂಟೆಗೆ ತಮ್ಮ ಕಚೇರಿಗಳು/ಶಾಲೆಗಳಿಂದ ಹೊರಡಲು ಸರ್ಕಾರವು ಈ ಮೂಲಕ ಅನುಮತಿ ನೀಡಿದೆ, ಮೇಲಿನ ಅವಧಿಯಲ್ಲಿ ಸೇವೆಗಳ ತುರ್ತು ಪರಿಸ್ಥಿತಿಯಿಂದಾಗಿ ಅವರ ಉಪಸ್ಥಿತಿಯು ಅಗತ್ಯವಿರುವಾಗ ಹೊರತುಪಡಿಸಿ, ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ‘ತುಷ್ಟೀಕರಣ’ ರಾಜಕೀಯಕ್ಕೆ ಬಿಜೆಪಿ ಟೀಕೆ
ಮುಸ್ಲಿಂ ಉದ್ಯೋಗಿಗಳಿಗೆ ಕೆಲಸದ ಸಮಯವನ್ನು ಕಡಿತಗೊಳಿಸುವ ಅವಕಾಶ ನೀಡಿದ್ದಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಇದನ್ನು ತುಷ್ಟೀಕರಣ ತಂತ್ರ ಎಂದು ಕರೆದಿರುವ ಬಿಜೆಪಿ, ನವರಾತ್ರಿಯ ಉಪವಾಸದ ಸಮಯದಲ್ಲಿ ಹಿಂದುಗಳಿಗೆ ಅಂತಹ ಯಾವುದೇ ರಿಯಾಯಿತಿಗಳನ್ನು ನೀಡಲಾಗಿಲ್ಲ ಎಂದು ಆರೋಪಿಸಿದೆ.
ರಂಜಾನ್ ಸಮಯದಲ್ಲಿ ಮುಸ್ಲಿಂ ರಾಜ್ಯ ನೌಕರರಿಗೆ ಕೆಲಸದ ಸಮಯವನ್ನು ಸಡಿಲಗೊಳಿಸಲು ಅನುಮೋದನೆ ನೀಡಿರುವ ತೆಲಂಗಾಣ ಕಾಂಗ್ರೆಸ್ ಸರ್ಕಾರವನ್ನು ತುಷ್ಟೀಕರಣದ ದೋಷವು ಹೊಡೆಯುತ್ತದೆ. ನವರಾತ್ರಿಯ ಸಮಯದಲ್ಲಿ ಹಿಂದೂಗಳು ಉಪವಾಸ ಮಾಡುವಾಗ ಅಂತಹ ಯಾವುದೇ ರಿಯಾಯಿತಿಗಳನ್ನು ನೀಡಲಾಗುವುದಿಲ್ಲ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.