ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಶಿವಸೇನೆಯ ವಿರುದ್ಧ ಬಂಡಾಯವೆದ್ದ ಏಕನಾಥ್ ಶಿಂದೆ ಬಳಗ ಬಿಜೆಪಿ ಜೊತೆ ಸರ್ಕಾರ ಕಟ್ಟಿದ್ದು, ಇದರ ನಡುವೆ ಇತ್ತ ಶಿವಸೇನೆಯ ಚಿಹ್ನೆಯಾಗಿರುವ ಬಿಲ್ಲು, ಬಾಣ ಯಾವ ಬಣದ ಪಾಲಾಗಲಿದೆ ಎಂಬ ಪ್ರಶ್ನೆ ಈಗ ಹುಟ್ಟಿದೆ.
ಇದೀಗ ಕುರಿತು ಮೊದಲ ಸಲ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತನಾಡಿದ್ದು, ಶಿವಸೇನೆಯಿಂದ ಬಿಲ್ಲು, ಬಾಣ ತೆಗೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಅದು ಶಿವಸೇನೆಗೆ ಸೇರಿದ್ದು. ಏನೇ ಆಗಲಿ ನಾವು ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಏಕನಾಥ್ ಶಿಂದೆ ಬಳಗಕ್ಕೆ ಶಿವಸೇನೆಯ ಬಿಲ್ಲು, ಬಾಣ ಚಿಹ್ನೆ ಸಿಗಲಿದೆ ಎಂಬು ಮಾತು ಕೇಳಿ ಬರುತ್ತಿದ್ದು, ಇದರ ಬೆನ್ನಲ್ಲೇ ಉದ್ಧವ್ ಠಾಕ್ರೆ ಮಾತನಾಡಿದ್ದಾರೆ.
ಶಿವಸೇನೆಯ ಬಿಲ್ಲು, ಬಾಣ ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬಳಕವೇ ನಾನು ಮಾತನಾಡುತ್ತಿದ್ದೇನೆ. ಶಿವಸೇನೆಯ ಶಾಸಕರು ಪಲಾಯನ ಮಾಡಿದ್ದಾರೆ. ಶಾಸಕರ ಪಲಾಯನದೊಂದಿಗೆ ಪಕ್ಷ ಪತನವಾಗುವುದಿಲ್ಲ. ಮಾತೋಶ್ರೀ ಬಗ್ಗೆ ಜನರಲ್ಲಿ ಅಪಾರವಾದ ಹೆಮ್ಮೆ ಇದೆ ಎಂದಿದ್ದಾರೆ.
ಇದರ ನಡುವೆ ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ನಡೆಸುವಂತೆ ಉದ್ಧವ್ ಠಾಕ್ರೆ ಆಗ್ರಹಿಸಿದ್ದು, ಇವತ್ತೇ ವಿಧಾನಸಭೆ ಚುನಾವಣೆ ನಡೆಸಿ ಎಂದು ನಾನು ಅವರಿಗೆ ಸವಾಲು ಹಾಕುತ್ತೇನೆ. ನಾನು ತಪ್ಪು ಮಾಡಿದ್ದರೆ ಜನರೇ ನಮ್ಮನ್ನು ಮನೆಗೆ ಕಳುಹಿಸುತ್ತಾರೆ. ಈಗ ಮಾಡಿರುವುದನ್ನ ಕಳೆದ ಎರಡೂವರೆ ವರ್ಷಗಳ ಹಿಂದೆಯೇ ಮಾಡಬೇಕಿತ್ತು. ಗೌರವದ ರೀತಿಯಲ್ಲಿ ಮಾಡಬೇಕಿತ್ತು ಎಂದು ಪ್ರಶ್ನೆ ಮಾಡಿದರು.