ಹೊಸದಿಗಂತ ವರದಿ,ಮೈಸೂರು:
ದಕ್ಷಿಣ ಭಾರತದಲ್ಲಿ ಮೈಸೂರನ್ನು ಪ್ರವಾಸೋದ್ಯಮದ ಕೇಂದ್ರವನ್ನಾಗಿಸುವ ಆಸೆ, ಗುರಿಯಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಗುರುವಾರ ಸಂಜೆ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿ, ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮೈಸೂರು ಅಭಿವೃದ್ಧಿಗೆ ನನ್ನದೇ ಆದ ಕನಸುಗಳಿವೆ. ಕಳೆದ ಒಂದು ವರ್ಷದ ಹಿಂದೆಯೇ ನಾನು ರಾಜಕೀಯಕ್ಕೆ ಬರುವುದಕ್ಕೆ ಪ್ಲಾನ್ ಮಾಡಲಾಗಿತ್ತು. ಟಿಕೆಟ್ ಪಡೆಯುವುದಕ್ಕೆ ರಾಜಸ್ತಾನ ಮೂಲ, ಪ್ರಭಾವ ಏನೂ ಇಲ್ಲ. ತಾಯಿಯ ಆರ್ಶೀವಾದ ಪಡೆದು ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದರು.
ರಾಜಕೀಯವೇ ನನಗೆ ದೊಡ್ಡ ಚಾಲೆಂಜ್. ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ. ರಾಜಕೀಯದಲ್ಲಿ ಟೀಕೆಗಳು ಬರುವುದು ಸಹಜ. ಸಾಂಬರ್ನಲ್ಲಿ ಮೆಣಸಿನ ಕಾಯಿ ಸಿಕ್ಕಂತೆ ಟೀಕೆಗಳು ಬರುತ್ತವೆ. ಎಲ್ಲವನ್ನೂ ಎದುರಿಸುವುದಕ್ಕೆ ಸಿದ್ಧನಿದ್ದೇನೆ ಎಂದರು.
ಎಸಿ ರೂಂನಿoದ ಹೊರ ಬರುವುದು ದೊಡ್ಡ ವಿಷಯವೇನಿಲ್ಲ. ರಾಜಪ್ರಭುತ್ವ ಎಂದೇನೂ ಇಲ್ಲ. ಸಂವಿಧಾನ, ಕಾನೂನು, ದೇವರ ಮುಂದೆ ಎಲ್ಲರೂ ಒಂದೇ. ಕುಟುಂಬದ ವ್ಯಾಜ್ಯಗಳು ಕಾನೂನು ವ್ಯಾಪ್ತಿಯಲ್ಲಿವೆ. ಕಾನೂನು ಪ್ರಕಾರವೇ ಕೇಸ್ಗಳು ನಡೆಯುತ್ತವೆ. ರಾಜಕೀಯಕ್ಕೂ ಅದಕ್ಕೂ ಯಾವುದೇ ಸಂಬoಧವಿಲ್ಲ ಎಂದು ತಿಳಿಸಿದರು.