ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಮ್ಮ ಇಬ್ಬರು ನಾಯಕರನ್ನು ಸಿಲುಕಿಸುವ ಮೂಲಕ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ನಾವು ಯಾರಿಗೂ ಹೆದರುವುದಿಲ್ಲ. ಯಾರ ಮುಂದೆಯೂ ತಲೆ ಬಾಗುವುದೂ ಇಲ್ಲ. ಈ ಪ್ರಕರಣ ಸಂಬಂಧ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಕೇಂದ್ರ ತನಿಖಾ ತಂಡವು ವಿಚಾರಣೆ ನಡೆಸಿದ್ದು, ಬರಿಗೈಯಲ್ಲಿ ತೆರಳಿದೆ. ನಮ್ಮ ನಾಯಕರು ಹೆದರುವ ಜಾಯಮಾನದವರಲ್ಲ ಎಂದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಜನಸಾಮಾನ್ಯರ ಧ್ವನಿಯನ್ನು ಒಗ್ಗೂಡಿಸುವ ಸಲುವಾಗಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಆರಂಭಿಸಲಾಯಿತು. ಇದೀಗ ಪಕ್ಷದ ಬೆನ್ನುಲುಬಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಸುಮ್ಮನೆ ಗುರಿ ಮಾಡಲಾಗುತ್ತಿದೆ ಎಂದರು.