ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯ(ಇಡಿ)ದ ತನಿಖೆಯು ಬಿಜೆಪಿಯ ಬೆದರಿಕೆ ತಂತ್ರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ತನಿಖಾ ಸಂಸ್ಥೆಯು ದೆಹಲಿಯಲ್ಲಿರುವ ಯಂಗ್ ಇಂಡಿಯಾ ಕಚೇರಿಯನ್ನು ಸೀಲ್ ಮಾಡಿದ ಒಂದು ದಿನದ ನಂತರ “ಈ ತಂತ್ರಕ್ಕೆ ನಾವು ಹೆದರುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ ತನಿಖಾ ಸಂಸ್ಥೆಯು ದೆಹಲಿಯಲ್ಲಿರುವ ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ಕಚೇರಿಯಲ್ಲಿ ನಡೆಯುತ್ತಿರುವ ಯಂಗ್ ಇಂಡಿಯನ್ ಆವರಣವನ್ನು ತಾತ್ಕಾಲಿಕವಾಗಿ ಸೀಲ್ ಮಾಡಿದೆ. ಪೂರ್ವಾನುಮತಿ ಪಡೆಯದೆ ಆವರಣವನ್ನು ತೆರೆಯಬಾರದು ಎಂದೂ ಇಡಿ ಸೂಚನೆ ನೀಡಿದೆ. ಉಳಿದಂತೆ ಹೆರಾಲ್ಡ್ ಹೌಸ್ ಕಟ್ಟಡದಲ್ಲಿರುವ ನ್ಯಾಷನಲ್ ಹೆರಾಲ್ಡ್ ಕಚೇರಿ ಬಳಕೆಗೆ ಮುಕ್ತವಾಗಿದೆ..
“ಸತ್ಯದ ಧ್ವನಿಯು ಪೊಲೀಸ್ ಕಾವಲುಗಾರರಿಗೆ ಹೆದರುವುದಿಲ್ಲ … ಹಣದುಬ್ಬರ ಮತ್ತು ನಿರುದ್ಯೋಗದ ಬಗ್ಗೆ ಇನ್ನೂ ಪ್ರಶ್ನೆಗಳನ್ನು ಕೇಳಲಾಗುತ್ತದೆ.” ಎಂದು ಕಾಂಗ್ರೆಸ್ ಪಕ್ಷವು ಆರೋಪಿಸಿದೆ. ಅಲ್ಲದೇ ಈ ರೀತಿಯ ಕ್ಷುಲ್ಲಕ ರಾಜಕೀಯಕ್ಕೆ ಯಾವುದೇ ಕಾರಣಕ್ಕೂ ನಾವು ಹೆದರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.