ಹೊಸದಿಗಂತ ವರದಿ ಧಾರವಾಡ:
ಯುವಜನೋತ್ಸವ ದೇಶದ ಎಲ್ಲ ಸಂಸ್ಕೃತಿಗಳ ಸಮ್ಮಿಲನದ ವೇದಿಕೆಯಾಗಿದೆ ಎಂದು ಸಕ್ಕರೆ ಹಾಗೂ ಜವಳಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಹಸಿರು ಉದ್ಯಾನವನದಲ್ಲಿ ಯುವ ಕಲಾವಿದರ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಯುವಜನೋತ್ಸವ ಧಾರವಾಡದಲ್ಲಿ ನಡೆಯುತ್ತಿರುವುದು ಸೌಭಾಗ್ಯ. ಭಾರತ ಯುವ ದೇಶ. ಯುವ ಜನತೆಯ ಏಳಿಗೆಗೆ ಮೋದಿ ಹಾಗೂ ಬೊಮ್ಮಾಯಿ ಸರ್ಕಾರ ಬದ್ಧವಾಗಿದೆ. ಯುವಜನೋತ್ಸವದ ನಿಮಿತ್ತ ದೇಶದ ನಾನಾ ಭಾಗದ ಕಲಾವಿದರು ಒಂದೆಡೆ ಸೇರುವ ಅವಕಾಶ ಒದಗಿದೆ ಎಂದರು.
ಕವಿವಿ ಕುಲಪತಿ ಕೆ.ಬಿ. ಗುಡಸಿ ಮಾತನಾಡಿ, ದೇಶ ಒಂದು ಎಂಬ ಭಾವನೆಯಿಂದ ಕಲೆಯನ್ನು ಪ್ರಕಟಗೊಳಿಸಿ. ಇಲ್ಲಿ ಬಂದಿರುವುದು ನಿಮಗೆ ಸಿಕ್ಕ ದೊಡ್ಡ ಅವಕಾಶ. ಇದನ್ನು ಸದ್ಬಳಸಿಕೊಳ್ಳಿ ಎಂದು ಕಲಾವಿದರಿಗೆ ಕಿವಿಮಾತು ಹೇಳಿದರು.
ಯುವ ಕಲಾವಿದರ ಶಿಬಿರದಲ್ಲಿ ಪೇಟಿಂಗ್, ಶಿಲ್ಪ ಕಲೆ, ಫೊಟೊಗ್ರಾಫಿ ಸ್ಪರ್ಧೆಗೆ ಚಾಲನೆ ದೊರಕಿತು. ಜ. 15ರ ವರೆಗೆ ಮೂರು ದಿನಗಳ ಕಾಲ ವಿವಿಧ ಹಂತದಲ್ಲಿ ಈ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆ ಜೊತೆಗೆ ಕಲಾ ಪ್ರದರ್ಶನವನ್ನೂ ಸಹ ಆಯೋಜಿಸಲಾಗಿದೆ.