ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ (ಫೆ.14) ಯುಎಇ ಪ್ರವಾಸ ಮುಗಿದ ಬಳಿಕ ಕತಾರ್ನ ದೋಹಾಕ್ಕೆ ತೆರಳಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ತಿಳಿಸಿದ್ದಾರೆ.
ಮೋದಿ ಅವರ ಈ ಭೇಟಿ ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಹಾಗೂ ಅನೇಕ ರಾಜತಾಂತ್ರಿಕ ಮಾತುಕತೆ ನಡೆಸುವ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ಇತ್ತ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕತಾರ್ನಲ್ಲಿ ಜೈಲು ಪಾಲಾಗಿದ್ದ 8 ಮಂದಿಯ ನೌಕಾಪಡೆಯ ಮಾಜಿ ಯೋಧರ ಗಲ್ಲುಶಿಕ್ಷೆಯನ್ನು ವಜಾ ಮಾಡಿ ಅವರನ್ನು ಕತಾರ್ ನ್ಯಾಯಲಯ ಬಿಡುಗಡೆಗೆ ಆದೇಶ ನೀಡಿತ್ತು. ಇಂದು ಕತಾರ್ನಿಂದ ಭಾರತಕ್ಕೆ ಬಂದಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಕತಾರ್ ಪ್ರವಾಸ ಮಹತ್ವ ಪಡೆದಿದೆ.
ಪ್ರಧಾನಿ ಮೋದಿಯವರ ಮಧ್ಯಸ್ಥಿಕೆ ಇಲ್ಲದೆ ಕತಾರ್ನಲ್ಲಿ ಜೈಲು ಪಾಲಾಗಿದ್ದ 8 ಮಂದಿಯ ಬಿಡುಗಡೆ ಸಾಧ್ಯವಿಲ್ಲ ಎಂದು ಭಾರತಕ್ಕೆ ಮರಳಿದ ಮಾಜಿ ನೌಕಾಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಪ್ರಧಾನಿ ಮೋದಿ ಅವರು ಈ 8 ಜನರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರ ಮೇಲಿರುವ ಪ್ರಕರಣದ ನಿರ್ವಹಣೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.
ಭಾರತದ 8.4 ಲಕ್ಷಕ್ಕೂ ಹೆಚ್ಚು ಜನ ಕತಾರ್ನಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಭೇಟಿ ಮಾಡಲು ಹಾಗೂ ಎರಡು ದೇಶಗಳು ಗಾಢವಾದ ಸ್ನೇಹವನ್ನು ಹೊಂದಿದೆ, ಇದನ್ನು ಮತ್ತಷ್ಟು ಬಲಪಡಿಸಲು ಅಲ್ಲಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.
ಶೀಘ್ರದಲ್ಲೇ ಭಾರತಕ್ಕೆ ಕಮಾಂಡರ್ ತಿವಾರಿ
ಇಂದು 8 ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳ ಪೈಕಿ 7 ಜನ ಮಾತ್ರ ಭಾರತಕ್ಕೆ ಬಂದಿದ್ದಾರೆ. ಕಮಾಂಡರ್ ತಿವಾರಿ ಅವರು ದೋಹಾದಲ್ಲಿಯೇ ಉಳಿದುಕೊಂಡಿದ್ದು ಶೀಘ್ರದಲ್ಲೇ ಭಾರತಕ್ಕೆ ಮರಳುವ ಸಾಧ್ಯತೆಯಿದೆ ಎಂದು ಪಿಟಿಐ ಹೇಳಿದೆ. ಕತಾರ್ನ ಈ ನಿರ್ಧಾರಕ್ಕೆ ಭಾರತ ಪ್ರಶಂಸೆ ವ್ಯಕ್ತಪಡಿಸಿದೆ.
ಅಕ್ಟೋಬರ್ 26 ರಂದು, ನೌಕಾಪಡೆಯ ಯೋಧರಿಗೆ ಕತಾರ್ನ ಪ್ರ ನ್ಯಾಯಾಲಯವು ಮರಣದಂಡನೆ ವಿಧಿಸಿತು. ಡಿಸೆಂಬರ್ 28 ರಂದು, ಗಲ್ಫ್ ರಾಷ್ಟ್ರದ ಮೇಲ್ಮನವಿಗೆ ನ್ಯಾಯಾಲಯವು ಮರಣದಂಡನೆಯನ್ನು ಕಡಿಮೆಗೊಳಿಸಿತು ಮತ್ತು ಅವರಿಗೆ ಮೂರರಿಂದ 25 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಿತು. ಕಳೆದ ವರ್ಷ ಡಿಸೆಂಬರ್ನಲ್ಲಿ, ದುಬೈನಲ್ಲಿ ನಡೆದ COP28 ಶೃಂಗಸಭೆಯಲ್ಲಿ ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು ಮತ್ತು ಕತಾರ್ನಲ್ಲಿರುವ ಭಾರತೀಯ ಸಮುದಾಯದ ಯೋಗಕ್ಷೇಮದ ಬಗ್ಗೆ ಚರ್ಚಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಭಾರತೀಯರ ಬಿಡುಗಡೆಗೆ ಕತಾರ್ ಅಧಿಕಾರಿಗಳೊಂದಿಗಿನ ಮಾತುಕತೆ ನಡೆಸಿದರು.