ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ನ ಖಾರ್ಕೀವ್ ನಲ್ಲಿ ಸಿಲುಕಿರುವ ಬಹುತೇಕ ಭಾರತೀಯರು ಹೊರಬಂದಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಖಾರ್ಕೀವ್ ನಗರವನ್ನು ಎಲ್ಲಾ ಭಾರತೀಯರು ತೊರೆದಿದ್ದಾರೆ. ಅವರನ್ನು ಶೀಘ್ರ ತಾಯ್ನಾಡಿಗೆ ಕರೆತರಲಾಗುವುದು. ಇನ್ನು ಈಗ ಯುದ್ಧ ಪೀಡಿತ ಮತ್ತೊಂದು ಪ್ರಮುಖ ನಗರ ಸುಮಿಯ ಬಗ್ಗೆ ಸರ್ಕಾರ ಹೆಚ್ಚಿನ ಗಮನಹರಿಸುತ್ತದೆ ಎಂದಿದೆ.
ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದು, ಈಗಾಗಲೇ ಮೂರು ಬಸ್ ಗಳು ಪಿಸೊಚಿನ್ ಗೆ ತಲುಪಿದ್ದು, ಅಲ್ಲಿ ಪಶ್ಚಿಮ ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಆದರೆ ಪೂರ್ವ ಉಕ್ರೇನ್ ನ ಸುಮಿಯಲ್ಲಿ ನೂರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಆದರೆ ಅಲ್ಲಿನ ಸಂಘರ್ಷಕ್ಕೆ ರಷ್ಯಾ ವಿರಾಮ ಘೋಷಿಸದ ಕಾರಣ ಭಾರತೀಯರನ್ನು ಸ್ಥಳಾಂತರಿಸುವುದು ಸವಾಲಾಗಿದೆ ಎಂದಿದ್ದಾರೆ.
ಭಾರತೀಯರ ಸುರಕ್ಷತೆಗಾಗಿ ಭಾರತ ಸರ್ಕಾರ ಉಕ್ರೇನ್ ಹಾಗು ರಷ್ಯಾ ದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕದನ ವಿರಾಮಕ್ಕಾಗಿ ಒತ್ತಡ ಹೇರಲಾಗುತ್ತಿದೆ ಎಂದು ತಿಳಿಸಿದರು.