ಹೊಸದಿಗಂತ ವರದಿ ಬೆಳಗಾವಿ:
ಶುಕ್ರವಾರ ಬೆಳ್ಳಂಬೆಳಗ್ಗೆ ಆಹಾರ ಅರಸಿ ಕುಂದಾನಗರಿಗೆ ಬಂದಿದ್ದ ಗಜರಾಜ, ರಾಜಾರೋಷವಾಗಿ
ಓಡಾಟ ನಡೆಸಿದ್ದು ಗಮನ ಸೆಳೆಯಿತು.
ಶುಕ್ರವಾರ ನಸುಕಿನ ಜಾವದಲ್ಲಿ ನಗರದ ಹೊರವಲಯದ ಹಿಂಡಾಲ್ಕೂ ಬಳಿಯ ಕಂಗ್ರಾಳಿಗೆ ಎಂಟ್ರಿ ಕೊಟ್ಟಿದ್ದ ಗಜರಾಜ ನಂತರ, ಬಾಕ್ಸಿಟ್ ರಸ್ತೆಯ ಅಜಮ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಉಚಗಾಂವದತ್ತ ಹೆಜ್ಜೆ ಹಾಕಿ ಮತ್ತೆ ಕಾಡಿಗೆ ತೆರಳಿದೆ.
ಆನೆ ಕಂಡು ನಗರ ವಾಸಿಗಳು ಆತಂಕಕ್ಕೆ ಒಳಗಾಗಿದ್ದರೆ, ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಇನ್ನೊಂದೆಡೆ ಅದೃಷ್ಟವಶಾತ್ ಜನರಿಗೆ ಯಾವುದೇ ತೊಂದರೆಯನ್ನು ಉಂಟು ಮಾಡಿಲ್ಲ. ಬಹುಶ: ಕಾಕತಿ ಅರಣ್ಯ ಪ್ರದೇಶದಿಂದ ಬಂದಿದೆ ಎಂದು ಅಂದಾಜಿಸಲಾಗಿದೆ.
ನಸುಕಿನ ಜಾವ ಕಂಗ್ರಾಳಿಯಲ್ಲಿ ವಾಯು ವಿಹಾರಕ್ಕೆ ಹೋಗಿದ್ದ ಜನರು ಮೊದಲು ಆನೆಯನ್ನು ಕಂಡು ದಂಗಾದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಜನ ತಂಡೋಪತಂಡವಾಗಿ ಆಗಮಿಸಿ ಆನೆ ನೋಡಲು ಮುಗಿಬಿದ್ದರು. ಕೆಲವರು ಮೊಬೈಲ್ ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.