ಹೊಸದಿಗಂತ ವರದಿ, ನಂಜನಗೂಡು:
ಸ್ನೇಹಿತನ ಜೊತೆ ನದಿಗೆ ಈಜಲು ತೆರಳಿದ್ದ ಇಂಜಿನಿಯರಿoಗ್ ವಿದ್ಯಾರ್ಥಿಯೋರ್ವ ನೀರುಪಾಲಾಗಿರುವ ಧಾರುಣ ಘಟನೆ ತಾಲೂಕಿನ ಹುಲ್ಲಹಳ್ಳಿ ಸಮೀಪದ ಹತ್ವಾಳು ಕಟ್ಟೆಯಲ್ಲಿ ನಡೆದಿದೆ.
ತಾಂಡವಪುರ ಎoಐಟಿ ಇoಜಿನಿಯರಿoಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ ವಿಧ್ಯಾರ್ಥಿ ಅಭಿಷೇಕ್(೨೩) ಮೃತ ದುರ್ದೈವಿ, ಈತ ನಂಜನಗೂಡು ನಗರದ ಕೃಷ್ಣಮೂರ್ತಿ ಲೇಔಟ್ ನಿವಾಸಿ ಶ್ರೀನಿವಾಸಾಚಾರ್ ಎಂಬುವರ ಪುತ್ರನಾಗಿದ್ದು ಕಾಲೇಜಿಗೆ ರಜೆ ಇದ್ದ ಕಾರಣ ಅಭಿಷೇಕ್ ಬುಧವಾರ ಸಂಜೆ ತನ್ನ ಸ್ನೇಹಿತರಾದ ಸಮರ್ಥ್ ಹಾಗೂ ಪ್ರೀತಂ ಎಂಬುವರ ಜೊತೆ ಹುಲ್ಲಹಳ್ಳಿ ಸಮೀಪದ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹತ್ವಾಳು ಕಟ್ಟೆಯಲ್ಲಿ ಈಜಲು ತೆರಳಿದ್ದಾನೆ. ಸ್ನೇಹಿತರ ಜೊತೆಗೆ ನೀರಿಗೆ ಧುಮುಕಿ ಈಜುತ್ತಾ ಮುಂದೆ ಸಾಗಿದ ಅಭಿಷೇಕ್ ವಾಪಸ್ ಹಿಂದಕ್ಕೆ ಬರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಈ ವೇಳೆ ಜೊತೆಯಲ್ಲಿ ನೀರಿಗಿಳಿದಿದ್ದ ಸ್ನೇಹಿತರು ತಕ್ಷಣ ಕೂಗಿ ಕೊಂಡಾಗ ಸ್ಥಳದಲ್ಲಿದ್ದವರು ಆಗಮಿಸಿ ನೀರಿಗಿಳಿದು ಶೋಧ ನಡೆಸಿ ನೀರಿನಲ್ಲಿ ಮುಳುಗಿದ್ದ ಅಭಿಷೇಕ್ನನ್ನು ಮೇಲೆತ್ತಿದರಾದರೂ ಅಷ್ಟರಲ್ಲಾಗಲೇ ಆತ ಮೃತ ಪಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ಮೃತನ ತಂದೆ ನೀಡಿದ ದೂರನ್ನಾಧರಿಸಿ ಹುಲ್ಲಹಳ್ಳಿ ಠಾಣೆ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೊಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.