ಹೊಸದಿಗಂತ ಡಿಜಿಟಲ್ ಡೆಸ್ಕ್
ನೇಪಾಳದಲ್ಲಿ ಭಾನುವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾದ ನಾಲ್ವರು ಭಾರತೀಯರು ಸೇರಿದಂತೆ 22 ಜನರ ಮೃತದೇಹಗಳನ್ನು ಕಠ್ಮಂಡುವಿಗೆ ತರಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು.
ಕೆನಡಾ ನಿರ್ಮಿತ ಟರ್ಬೊಪ್ರೊಪ್ ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು ಪ್ರವಾಸಿ ನಗರವಾದ ಪೊಖರಾದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ. ನಾಲ್ವರು ಭಾರತೀಯರು, ಇಬ್ಬರು ಜರ್ಮನ್ನರು ಮತ್ತು 13 ನೇಪಾಳಿ ಪ್ರಯಾಣಿಕರು ಸೇರಿದಂತೆ ಒಟ್ಟು 22 ಜನರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾರಾ ಏರ್ಗೆ ಸೇರಿದ ವಿಮಾನದ ಅವಶೇಷಗಳ ಸ್ಥಳದಿಂದ 21 ಶವಗಳನ್ನು ಸೋಮವಾರ ಹೊರತೆಗೆದಿದ್ದಾರೆ. ಇಂದುಕೊನೆಯ ದೇಹವನ್ನು ಸಹ ಪತ್ತೆ ಮಾಡಲಾಗಿದೆ. ಎಲ್ಲಾ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಮೃತರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ತಾರಾ ಏರ್ ವಿಮಾನ ಪತನಕ್ಕೆ ಕಾರಣವನ್ನು ಕಂಡು ಹಿಡಿಯಲು ಹಿರಿಯ ಏರೋನಾಟಿಕಲ್ ಇಂಜಿನಿಯರ್ ರತೀಶ್ ಚಂದ್ರ ಲಾಲ್ ಸುಮನ್ ನೇತೃತ್ವದ ಐದು ಸದಸ್ಯರ ತನಿಖಾ ಆಯೋಗವನ್ನು ಸರ್ಕಾರ ರಚಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರತಿಕೂಲ ಹವಾಮಾನವೇ ವಿಮಾನ ಪತನಕ್ಕೆ ಕಾರಣ. ವಿಮಾನದ ಕಪ್ಪು ಪೆಟ್ಟಿಗೆಯನ್ನು ಅನುಭವಿ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪರ್ವತ ಮಾರ್ಗದರ್ಶಕರ ತಂಡವು ಮಂಗಳವಾರ ಅಪಘಾತದ ಸ್ಥಳದಿಂದ ಹಿಂಪಡೆದಿದೆ ಮತ್ತು ಅದನ್ನು ಕಠ್ಮಂಡುವಿಗೆ ಸಾಗಿಸಲಾಗುತ್ತದೆ.