ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಸಕಲೇಶಪುರ ತಾಲೂಕಿನ ದೊಣಿಗಲ್ ಬಳಿ ಭೂಕುಸಿತದ ಕಾರಣಕ್ಕೆ ಎಲ್ಲಾ ಬಗೆಯ ವಾಹನಗಳ ಸಂಚಾರ ನಿಷೇಧಿಸಲ್ಪಟ್ಟಿದ್ದ ಶಿರಾಡಿ ಘಾಟ್ ರಸ್ತೆಯಲ್ಲಿ ಭಾನುವಾರದಂದು ಹೊಸ ಆದೇಶ ಪ್ರಕಟಿಸಲಾಗಿದ್ದು, ಘನ ವಾಹನಗಳ ಹೊರತಾಗಿ ಲಘು ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಿ ಅವಕಾಶ ನೀಡಲಾಗಿದೆ.
ದೋಣಿಗಲ್ ಪ್ರದೇಶದಲ್ಲಿ ಹೆದ್ದರಿ ಭಾಗದ ಭೂ ಕುಸಿತವನ್ನು ಮನಗಂಡು, ನಿಷೇಧಿಸಲಾದ ಎಲ್ಲಾ ವಾಹನಗಳ ಸಂಚಾರದಿಂದಾಗಿ ಉಳಿದ ರಸೆಗಳಲ್ಲಿ ಉಂಟಾದವಾಹನ ದಟ್ಟಣೆಯಿಂದ ಸಾರ್ವಜನಿಕರಿಗೆ ಆಗಿರುವ ಅನಾನುಕೂಲತೆಯನ್ನು ಪರಿಗಣಿಸಿ ಹಾಸನ ಜಿಲ್ಲಾಧಿಕಾರಿಯವರು ತನ್ನ ಮೊದಲ ಆದೇಶವನ್ನು ಪರಿವರ್ತನೆಗೊಳಿಸಿದ್ದು, ಅದರಂತೆ ಕಾರುಗಳು, ಜೀಪು, ಟೆಂಪೋ, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು, ಅಂಬುಲೆನ್ಸ್ ಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಸದರಿ ವಾಹನಗಳು ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವುದಾದರೆ, ವೇಗದ ಮಿತಿಯನ್ನು ಗಂಟೆಗೆ ೩೦ ಕಿ ಮೀ ನಂತೆ, ಸಕಲೇಶಪುರ-ಆನೆಮಹಲ್-ಕ್ಯಾನಹಳ್ಳಿ-ಜಿನ್ನಳ್ಳಿ-ಕಡಗರವಳ್ಳಿ- ಮಾರನಹಳ್ಳಿಯ ಮಾರ್ಗವಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ಮಂಗಳೂರಿನತ್ತ ಸಂಚರಿಸುವುದಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವುದಾದರೆ ಮಾರನಹಳ್ಳಿ- ಕಾಡುಮನೆ- ಹಾರ್ಲೆ-ಕೂಡಿಗೆ- ಆನೆಮಹಲ್- ಸಕಲೇಶಪುರ ಮಾರ್ಗವಾಗಿ ಬೆಂಗಳೂರಿನತ್ತ ಸಂಚರಿಸಬಹುದಾಗಿದೆ.
ಪರ್ಯಾಯ ಕಲ್ಪಿಸಲಾದ ಎರಡೂ ರಸ್ತೆಗ್ಲಲ್ಲಿ ಏಕಮುಖ ಸಂಚಾರ ಮಾತ್ರವಿರುತ್ತದೆ.