ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ನ ಸೋಲಿನ ಬಳಿಕ ಟೀಂ ಇಂಡಿಯಾ ಆಯ್ಕೆ ಮಂಡಳಿಯಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಅನೇಕರು ಸದಸ್ಯತ್ವದಿಂದ ವಿಸರ್ಜನೆ ಮಾಡಿದ್ದರು.
ಇದೀಗ ಬರೋಬ್ಬರಿ 50 ದಿನಗಳ ಬಳಿಕ ಭಾರತ ಕ್ರಿಕೆಟ್ ತಂಡದ ನೂತನ ಆಯ್ಕೆ ಸಮಿತಿಯನ್ನು ಪ್ರಕಟಿಸಿದೆ. ಹೊಸ ಆಯ್ಕೆ ಸಮಿತಿಯಲ್ಲಿ ಸ್ಥಾನ ಪಡೆದಿರುವ 5 ಸದಸ್ಯರ ಹೆಸರನ್ನು ಪ್ರಕಟಿಸಿರುವ ಬಿಸಿಸಿಐ, ಇದರಲ್ಲಿ ನಾಲ್ವರು ಹೊಸಬರಿಗೆ ಅವಕಾಶ ನೀಡಿದರೆ, ಮುಖ್ಯ ಆಯ್ಕೆದಾರನ ಸ್ಥಾನಕ್ಕೆ ಈ ಹಿಂದೆ ಇದೇ ಹುದ್ದೆಯಲ್ಲಿದ್ದ ಚೇತನ್ ಶರ್ಮಾ ಅವರನ್ನು ಮರು ಆಯ್ಕೆ ಮಾಡಿದೆ.
ಚೇತನ್ ಶರ್ಮಾ ನೇತೃತ್ವದ ಹಿಂದಿನ ಆಯ್ಕೆ ಸಮಿತಿ ಆಯ್ಕೆ ಮಾಡಿದ್ದ ಟೀಂ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿಯೇ ಬಿಸಿಸಿಐ ಹೊಸ ಆಯ್ಕೆ ಸಮಿತಿಯ ರಚನೆಗೆ ಮುಂದಾಗಿತ್ತು. ಆದ್ರೆ ಮತ್ತೊಮ್ಮೆ ಚೇತನ್ ಶರ್ಮಾ ಗೆ ಅವಕಾಶ ನೀಡಿದೆ .
ನೂತನ ಆಯ್ಕೆ ಸಮಿತಿಯ ಘೋಷಣೆಯ ಕುರಿತು ಬಿಸಿಸಿಐ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಹೊಸ ಆಯ್ಕೆ ಸಮಿತಿಯಲ್ಲಿ ಚೇತನ್ ಶರ್ಮಾ ಮಾತ್ರ ಹಳೆಯ ಮುಖವಾಗಿದ್ದು, ಉಳಿದ ನಾಲ್ವರು ಮೊದಲ ಬಾರಿಗೆ ಹಿರಿಯ ಆಯ್ಕೆ ಸಮಿತಿಯ ಭಾಗವಾಗಲಿದ್ದಾರೆ. ಇದರಲ್ಲಿ ಮಾಜಿ ಟೆಸ್ಟ್ ಕ್ರಿಕೆಟಿಗರಾದ ಸಲೀಲ್ ಅಂಕೋಲಾ, ಶಿವಸುಂದರ್ ದಾಸ್, ಸುಬ್ರೋತೊ ಬ್ಯಾನರ್ಜಿ ಮತ್ತು ಶ್ರೀಧರನ್ ಶರತ್ ಸ್ಥಾನ ಪಡೆದಿದ್ದಾರೆ.