ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳು ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿವೆ. ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಹಲವು ದಿನಗಳಾದರೂ ಆಡಳಿತ ರಚನೆ ಸ್ಪಷ್ಟವಾಗದ ಹಿನ್ನೆಲೆ, ಇದೀಗ ಈ ವಿಚಾರ ನ್ಯಾಯಾಂಗದ ಅಂಗಳಕ್ಕೂ ತಲುಪಿದೆ.
ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚನೆಗೆ ಅವಕಾಶ ನೀಡುವಲ್ಲಿ ಉಂಟಾಗಿರುವ ವಿಳಂಬದ ಕುರಿತು ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಎಂ. ರಾಮಸುಬ್ರಮಣಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:
ಅತಿ ಹೆಚ್ಚು ಸ್ಥಾನ ಗೆದ್ದ ಪಕ್ಷದ ನಾಯಕ ವಿಜಯ್ ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡದೇ, ರಾಜಭವನದಲ್ಲೇ ಬಹುಮತ ಸಾಬೀತುಪಡಿಸುವಂತೆ ಸೂಚಿಸಿರುವುದು ಸಂವಿಧಾನಾತ್ಮಕ ಪರಂಪರೆಗೆ ವಿರುದ್ಧ ಎಂದು ಅವರು ವಾದಿಸಿದ್ದಾರೆ.
ವಿಧಾನಸಭೆಯಲ್ಲೇ ಬಹುಮತ ಪರೀಕ್ಷೆ ನಡೆಸುವುದು ಸರಿಯಾದ ಕ್ರಮವಾಗಿದ್ದು, ಅದರ ಬದಲಾಗಿ ಬೇರೆ ವೇದಿಕೆಯಲ್ಲಿ ಸಂಖ್ಯಾಬಲ ತೋರಿಸುವಂತೆ ಒತ್ತಾಯಿಸುವುದು ಅಸಂವಿಧಾನಿಕ ನಡೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಅರ್ಜಿಯಿಂದ ತಮಿಳುನಾಡಿನ ರಾಜಕೀಯ ಬೆಳವಣಿಗೆಗೆ ಮತ್ತೊಂದು ಮಹತ್ವದ ತಿರುವು ಸಿಕ್ಕಿದ್ದು, ಸುಪ್ರೀಂ ಕೋರ್ಟ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದರತ್ತ ಈಗ ಎಲ್ಲರ ಗಮನ ನೆಟ್ಟಿದೆ.



