ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ (Kerala) ನಿಫಾ ವೈರಸ್ ಪತ್ತೆಯಾದ ಬೆನ್ನಲ್ಲೇ ಕರ್ನಾಟಕದಲ್ಲೂ (Karnataka) ರೋಗದ ಭೀತಿ ಹುಟ್ಟಿಕೊಂಡಿದ್ದು, ಅದು ಹರಡದಂತೆ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಕರ್ನಾಟಕದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಿಫಾ ವೈರಸ್ ನಿಂದ ಉಂಟಾಗಬಹುದಾದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಕೇರಳ ಗಡಿ ಪ್ರದೇಶಗಳಲ್ಲಿ ಎಚ್ಚರಿಕೆ ಮತ್ತು ಜಾಗರೂಕತೆ ಕ್ರಮವಹಿಸುವಂತೆ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚಿಸಿದ್ದಾರೆ.
ಅದೇ ರೀತಿ ವೈರಸ್ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾ ಕ್ಷಿಪ್ರ ಪ್ರತಿಕ್ರಿಯೆ ತಂಡದ ಸಭೆಯನ್ನು ನಡೆಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ.
ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು ಮತ್ತು ಎಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ನಿಫಾ ವೈರಸ್ ನಿರ್ವಹಣೆಗಾಗಿ 10 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಅನ್ನು ಕಾಯ್ದಿರಿಸುವಂತೆ ಹಾಗೂ ಆಮ್ಲಜನಕ ಮತ್ತು ಇತರ ಅಗತ್ಯ ಔಷಧಿಗಳನ್ನೊಳಗೊಂಡಂತೆ ಎಲ್ಲಾ ಪಿಎಚ್ ವೈದ್ಯಾಧಿಕಾರಿಗಳಿಗೆ ಜ್ವರದ ಕಣಾವಲು ಘಟಕಗಳನ್ನು ಬಲಪಡಿಸಲು ಸೂಚಿಸಿದೆ. ಅಲ್ಲದೆ ಅಗತ್ಯವಿರುವ ಔಷಧಿಗಳನ್ನು ಶೇಖರಿಸಿಟ್ಟುಕೊಳ್ಳಲು ಮತ್ತು ನಿಫಾ ರೋಗಲಕ್ಷಣಗಳಿಗೆ ಕ್ಷೇತ್ರ ಸಿಬ್ಬಂದಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾರೆ. .
ಯಾವುದೇ ಶಂಕಿತ ಪುಕರಣಗಳ ಮಾದರಿಯನ್ನು ಪುಣೆಯಲ್ಲಿನ ಎನ್ಐವಿ ಪುಯೋಗಾಲಯಕ್ಕೆ ಕಳುಹಿಸಲು ವ್ಯವಸ್ಥೆ ಮಾಡಬೇಕು.
ಮುಖ್ಯವಾಗಿ ಸಾರ್ಜನಿಕರಿಗೆ ಈ ಬಗ್ಗೆ ತಿಳುವಳಿಕೆ ನೀಡಲು, ಅರಿವು ಮೂಡಿಸಲು, ಜಾಗೃತವಹಿಸಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.