ಹೊಸ ದಿಗಂತ ವರದಿ, ಮಂಡ್ಯ :
ಮಳವಳ್ಳಿ ತಾಲೂಕಿನ ಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾದ ಮುತ್ತತ್ತಿಯಲ್ಲಿ ಡಿ.31 ರ ಬೆಳಿಗ್ಗೆ 6 ಗಂಟೆಯಿಂದ ಜನವರಿ ಒಂದರ ಸಂಜೆ 6 ಗಂಟೆವರೆಗೆ ಪ್ರವಾಸಿಗರಿಗೆ ಮತ್ತು ಭಕ್ತರಿಗೂ ಸಹ ಪ್ರವೇಶ ನಿಷೇಧಿಸಲಾಗಿದೆ.
ತಾಲ್ಲೂಕು ದಂಡಾಧಿಕಾರಿ ಕೆ.ಎನ್.ಲೋಕೇಶ ಆದೇಶದ ಮೇರೆಗೆ ಮುತ್ತತ್ತಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಆದುದರಿಂದ ಪ್ರವಾಸಿಗರು ಮುತ್ತತ್ತಿಗೆ ಬರುವ ಸಾಹಸ ಮಾಡಬೇಡಿ.ಪೊಲೀಸರು ಮತ್ತು ಅರಣ್ಯ ಇಲಾಖೆಯವರು ತಲವಾಡಿ ಚೆಕ್ ಪೋಸ್ಟ್ ನ ಬಳಿ ಕಟ್ಟೆಚ್ಚರ ವಹಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವಾರು ಜಿಲ್ಲೆಗಳಿಂದ ಪ್ರಸಿದ್ಧ ಪ್ರೇಕ್ಷಣೀಯ ಹಾಗೂ ಯಾತ್ರಾ ಸ್ಥಳ ಮುತ್ತತ್ತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆ ಇರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ವರ್ಷಾಚರಣೆ ವೇಳೆ ನದಿ ಅಂಚಿನಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ಮೋಜು ಮಸ್ತಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಮುತ್ತತ್ತಿ ಪ್ರವಾಸಿ ತಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಂತಿ ಸುವ್ಯವಸ್ಥೆ ,ಕಾನೂನು ಪಾಲನೆ ಮತ್ತು ಸಾರ್ವಜನಿಕ ಹಿತ ದೃಷ್ಟಿಯಿಂದ ಎರಡು ದಿನಗಳ ಕಾಲ ಸಿಆರ್ ಪಿ ಸಿ ಸೆಕ್ಷನ್ 144 ಅನ್ವಯ ನಿಷೇದಾಜ್ಞೆಯನ್ನು ಮಳವಳ್ಳಿ ತಾಲ್ಲೂಕು ದಂಡಾಧಿಕಾರಿ ಕೆ.ಎನ್.ಲೋಕೇಶ್ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ರಜಾ ದಿನಗಳಲ್ಲಿ ಹಾಗೂ ಭಾನುವಾರ ಹೆಚ್ಚು ಪ್ರವಾಸಿಗರು ಮುತ್ತತ್ತಿಗೆ ಬರುತ್ತಾರೆ ಆದರೆ ಅವರು ಸೌಂದರ್ಯ ಸೊಬಗನ್ನು ಸವಿದು ದೇವರ ದರುಶನ ಪಡೆದು ಹೋಗುವುದಿಲ್ಲ, ಮೋಜು ಮಸ್ತಿ ಮಾಡಿ ಮಧ್ಯಪಾನ ಮಾಡಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಸಾವು ನೋವುಗಳನ್ನು ತಂದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ತಾಲ್ಲೂಕು ಆಡಳಿತ ಈ ಕ್ರಮವನ್ನು ಕೈಗೊಂಡಿದೆ.