ದಿಗಂತ ವರದಿ ಹುಬ್ಬಳ್ಳಿ:
ಕೇಂದ್ರ ಸರ್ಕಾರ ಬರ ಪರಿಹಾರ ನೀಡುವುದಿಲ್ಲ ಎಂದು ಯಾವತ್ತು ಹೇಳಿಲ್ಲ. ಆದರೆ ಕಾಂಗ್ರೆಸ್ ರಾಜಕೀಯ ದುರುದ್ದೇಶದಿಂದ ನ್ಯಾಯಾಲಯದ ಮೆಟ್ಟಿಲೇರಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರ ವಿರುದ್ಧ ಹರಿಹಾಯ್ದರು.
ಶನಿವಾರ ಮಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆಡಳಿತ ನೀಡುತ್ತಿರುವುದನ್ನು ಸಹಿಸದ ಕಾಂಗ್ರೆಸ್ ಹಾಗೂ ಐಎನ್ಡಿಐಎ ಒಕ್ಕೂಟ ನ್ಯಾಯಾಲಯಕ್ಕೆ ಹೋಗುವ ಪರಂಪರೆ ಆರಂಭಿಸಿದ್ದಾರೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಅಕಾರಕ್ಕೆ ಬಂದು ಎಸ್ಡಿಆರ್ಎಫ್ ನಲ್ಲಿ ಪರಿವರ್ತನೆ ಮಾಡಿ ಮುಂಚಿತವಾಗಿ ಹಣ ನೀಡಲಾಗುತ್ತಿದೆ. 900ಕೋಟಿ ಬರ ಪರಿಹಾರ ನೀಡಬೇಕಾದ ಕಾಂಗ್ರೆಸ್ ರೈತರ ಖಾತೆಗೆ ಕೇವಲ 2 ಸಾವಿರ ಹಾಕಿದ್ದು ಏಕೆ? ಹಿಂದೆ ಬಿ.ಎಸ್. ಯಡಿಯೂರಪ್ಪ ಸರ್ಕಾರವಿದ್ದಾಗ ಎಲ್ಲ ಪರಿಹಾರ ನೀಡಿದ್ದಿಲ್ಲವೆ. ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದಕ್ಕೆ ಇದು ಸಾಕ್ಷಿ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಶೇ. 4 ರಷ್ಟು ಮುಸ್ಲಿಮರನ್ನು ಹಿಂದೂಳಿದ ವರ್ಗದಡಿ (ಒಬಿಸಿ) ಸೇರಿಸಿ ಅನ್ಯಾಯ ಮಾಡುತ್ತಿದೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯ ಜಾತಿ, ಧರ್ಮವಲ್ಲ ಎಂದಾದರೇ ಮತ್ತೆನೂ?. ಧರ್ಮ ಆಧಾರಿತ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದರು.
ಪ್ರವರ್ಗ 1 ರಲ್ಲಿ ಮುಸ್ಲಿಂ ಸಮುದಾಯದ 17 ಜಾತಿಗಳ, ಪ್ರವರ್ಗ 2 ರ ದಲ್ಲಿ 19 ಜಾತಿಗಳ ಸೇರಿಸಲಾಗಿದೆ. ಹಿಂದೂಳಿದ ಜಾತಿಗಳಾದ ಕುರುಬ, ಮರಠಾ, ಉಪ್ಪಾರ ಸೇರಿದಂತೆ ಎಲ್ಲ ಜಾತಿಗಳಿಗೆ ಈ ಮೂಲಕ ಚಿಪ್ಪು ನೀಡುತ್ತಿದೆ. ಕಾಂಗ್ರೆಸ್ ಯಾವ ಆಧಾರದ ಮೇಲೆ ಈ ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜಿನ ಖರ್ಗೆ ಅಭಿವೃದ್ಧಿ ಕೆಲಸದ ಮೇಲೆ ಮತ ಕೇಳಬೇಕು ಹೊರತು ಭಾವನಾತ್ಮಕವಾಗಿ ಬ್ಲಾಕ್ಮೇಲ್ ಮಾಡಬಾರದು. ಕಳೆದು 10 ವರ್ಷ ಸಂಸದ ಹಾಗೂ ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಕಾರಣ ಭಾವನಾತ್ಮಕ ಮತ ಕೇಳುತ್ತಿದ್ದಾರೆ ಎಂದು ಹೇಳಿದರು.