ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಗಳಲ್ಲಿ ಯಾವುದೇ ಒಂದು ಕೆಲಸವನ್ನೂ ಮಾಡಿಲ್ಲ. ಯಾರು ಕೇಳೋರೇ ಇಲ್ಲದಂತಾಗಿದೆ ಎಂದುಕೊಂಡವರ ವಿರುದ್ಧ ಜನರು ಸಿಡಿದೇಳಬೇಕಿದೆ ಎಂದು ನಟ ಚೇತನ್ ಅಹಿಂಸಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಭರವಸೆ ಕೊಡುವುದರಲ್ಲಿ ಎತ್ತಿದ ಕೈ. ಕೇವಲ ಅಧಿಕಾರಕ್ಕೆ ಬರಲು ಸುಳ್ಳು ಭರವಸೆ ನೀಡಲಾಗಿತ್ತು. ಅಧಿಕಾರ ಬಂದ ನಂತರ ಇಚ್ಛಾಶಕ್ತಿ ಕೊರತೆಯಿಂದ ಯಾವುದೇ
ಭರವಸೆಗಳನ್ನೂ ಜಾರಿಗೆ ತಂದಿಲ್ಲ. ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಲಿಲ್ಲ. ಜಾತಿಗಣತಿ ವರದಿ ಬಿಡುಗಡೆ ಮಾಡಲಿಲ್ಲ. ರೈತವಿರೋಧಿ ಕಾನೂನು ತೆಗೆಯಲಿಲ್ಲ. ರಾಜ್ಯ ಸರ್ಕಾರದಿಂದ ಕನ್ನಡದ ಜನತೆಗೆ ಯಾವುದಕ್ಕೂ ನ್ಯಾಯ ಸಿಗಲಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ಯಾರು ಹೇಳೋರಿಲ್ಲ, ಕೇಳೋರಿಲ್ಲ. ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ವಿರುದ್ಧ ಕೋಮುವಾದ ಎಂದು ವಿರೋಧಿಸಿ ಅಧಿಕಾರಕ್ಕೆ ಬಂದಿದ್ಆರೆ. ಆದರೆ, ಕೋಮುವಾದ ಹತ್ತಿಕ್ಕುವಲ್ಲಿಯೂ ವಿಫಲವಾಗಿದೆ. ಕರ್ನಾಟಕಕ್ಕೆ ಪರ್ಯಾಯ ಬೇಕಿದೆ, ಜನರ ಆಕ್ರೋಶ ಹೆಚ್ಚಾಗುತ್ತಿದೆ. ನಮಗೆ ಅಧಿಕಾರದ ಬಗ್ಗೆ ಕಾಳಜಿ ಇರೋ ಸರ್ಕಾರ ಬೇಕಿಲ್ಲ. ಜನರ ಬಗ್ಗೆ ಕಾಳಜಿ ಇರೋ ಸರ್ಕಾರ ಬೇಕಿದೆ ಎಂದು ನಟ ಚೇತನ್ ಅಹಿಂಸಾ ವಾಗ್ದಾಳಿ ನಡೆಸಿದರು.