ಹೊಸದಿಗಂತ ವರದಿ, ಹುಬ್ಬಳ್ಳಿ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಮಡಿವಾಳ ಸಮಾಜದ ನಿಗಮ ಮಂಡಳಿ ಆರಂಭಿಸಿದ್ದರು. ಆದರೆ ಇಲ್ಲಿಯವರೆಗೂ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕಮಾಡಿಲ್ಲ, ತಕ್ಷಣ ನೇಮಕ ಮಾಡಬೇಕು ಎಂದು ಜಿಲ್ಲಾ ಗುರು ಮಡಿವಾಳ ಮಾಜಿದೇವ ಸಮಾಜದ ಸದಸ್ಯ ಪರಶುರಾಮ ಮಡಿವಾಳವರ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳ ಸಮಾಜವನ್ನು ಹಿಂದೂಳಿದ ವರ್ಗಕ್ಕೆ ಸೇರಿಸಿರುವುದರಿಂದ ಸಮಾಜದವರು ಶಿಕ್ಷಣ ಹಾಗೂ ಕಂದಾಯ ಇಲಾಖೆಯಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.
ಸಮಾಜದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ತಪ್ಪಿಸುವುದಕ್ಕಾಗಿ ಸರ್ಕಾರ ಪ್ರತಿ ಜಿಲ್ಲೆಗೆ ಹಾಸ್ಟೆಲ್ ಮತ್ತು ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಎಲ್ಲ ಮಹನೀಯರ ಜಯಂತಿ ಸರ್ಕಾರಿ ಕಚೇರಿಯಲ್ಲಿ ಆಚರಿಸುವಂತೆ ಸಮಾಜದ ಗುರು ಮಡಿವಾಳ ಮಾಚಿದೇವ ಅವರ ಜಯಂತಿ ಆಚರಿಸಬೇಕು. ಸಮಾಜದವನ್ನು ಎಸ್ಸಿ ಮೀಸಲಾತಿಗೆ ಸೇರಿಸಬೇಕು. ತಾಲೂಕಿನ ಪ್ರತಿ ಗ್ರಾಮ ಮಟ್ಟದಲ್ಲಿ ನಮ್ಮ ಕುಲ ದುಡಿಮೆಯಾದ ಧೋಬಿ ಘಾಟ ಸ್ಥಾಪನೆ ಮತ್ತು ಅದಕ್ಕೆ ಬೇಕಾದ ಮೂಲ ಸೌಲಭ್ಯ ಸರ್ಕಾರ ನೀಡಬೇಕು ಎಂದರು.
ಸಂಘದ ಉಸ್ತುವಾರಿ ಹನುಮಂತಪ್ಪ ಮಡಿವಾಳವರ, ಚನ್ನಬಸಪ್ಪ ಮಡಿವಾಳವರ, ಪ್ರಕಾಶ ಮಡಿವಾಳವರ ಇದ್ದರು.