July 9, 2026
Thursday, July 9, 2026
spot_img

ವರುಣನ ಅಟ್ಟಹಾಸಕ್ಕೆ ನಡುಗಿದ ಉತ್ತರಾಖಂಡ: ಕೈಲಾಸ್ ಮಾನಸ ಸರೋವರ ರಸ್ತೆ ಸಂಪೂರ್ಣ ಬಂದ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉತ್ತರಾಖಂಡ ರಾಜ್ಯದಲ್ಲಿ ಮುಂಗಾರು ಮಳೆಯು ಭೀಕರ ರೂಪ ಪಡೆದುಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಿಂದಾಗಿ ಸರಣಿ ಭೂಕುಸಿತಗಳು, ರಸ್ತೆ ಸಂಪರ್ಕ ಕಡಿತ, ವಿದ್ಯುತ್ ವ್ಯತ್ಯಯ ಮತ್ತು ನದಿ ಪಾತ್ರದ ಸವೆತ ಉಂಟಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ರಾಜ್ಯದ ಕಾಶಿಪುರದಲ್ಲಿ ಗರಿಷ್ಠ 206 ಮಿಮೀ ಮಳೆ ದಾಖಲಾಗಿದ್ದು, ಇಡೀ ರಾಜ್ಯದಲ್ಲಿ ಸರಾಸರಿ 52.4 ಮಿಮೀ ಮಳೆಯಾಗಿದೆ.

ಪ್ರಸ್ತುತ ಮುಂಗಾರು ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು (IMD) ರಾಜ್ಯದ ಐದು ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಉಳಿದ ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ಸೂಚನೆಯೊಂದಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.

ಭೂಕುಸಿತ: 195 ರಸ್ತೆಗಳು ಬಂದ್, ಕೈಲಾಸ್ ಮಾರ್ಗ ಕಡಿತ!

ಅಧಿಕಾರಿಗಳ ಮಾಹಿತಿ ಪ್ರಕಾರ, ಭೂಕುಸಿತ ಮತ್ತು ಮಣ್ಣಿನ ಕುಸಿತದ ಕಾರಣದಿಂದಾಗಿ ರಾಜ್ಯದಾದ್ಯಂತ ಒಟ್ಟು 195 ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿವೆ. ಈ ಭೀಕರ ಹವಾಮಾನವು ಪ್ರಸಿದ್ಧ ‘ಕೈಲಾಸ್ ಮಾನಸ ಸರೋವರ ಯಾತ್ರೆ’ಯ ಮೇಲೂ ತೀವ್ರ ಪರಿಣಾಮ ಬೀರಿದೆ. ಮಾಲ್ಪಾ ಮತ್ತು ಲಾಮರಿ ನಡುವೆ ಸಂಭವಿಸಿದ ಬೃಹತ್ ಬಂಡೆ ಕುಸಿತದಿಂದಾಗಿ ವ್ಯಾಸ್ ಕಣಿವೆಯಲ್ಲಿರುವ ಚೀನಾ ಗಡಿಯ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಕುಸಿದ ಚಾರ್ ಧಾಮ್ ಯಾತ್ರಿಕರ ಸಂಖ್ಯೆ, ಶಾಲೆಗಳಿಗೆ ರಜೆ

ನಿರಂತರ ಮಳೆಯ ಆತಂಕದಿಂದಾಗಿ ಪ್ರಸಿದ್ಧ ಚಾರ್ ಧಾಮ್ ಯಾತ್ರೆಗೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಜೂನ್ ತಿಂಗಳಲ್ಲಿ ದಿನಕ್ಕೆ ಸುಮಾರು 50,000 ಇರುತ್ತಿದ್ದ ಯಾತ್ರಿಕರ ಸಂಖ್ಯೆ ಈಗ ಕೇವಲ 11,000 ಕ್ಕೆ ಇಳಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಮೋರಾ ಮತ್ತು ನೈನಿತಾಲ್ ಜಿಲ್ಲಾಡಳಿತಗಳು ಶುಕ್ರವಾರ 1 ರಿಂದ 12 ನೇ ತರಗತಿಯವರೆಗಿನ ಎಲ್ಲಾ ಸರ್ಕಾರಿ, ಖಾಸಗಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿವೆ.

ಇದನ್ನೂ ಓದಿ:

ಹೈ ಅಲರ್ಟ್‌ನಲ್ಲಿರುವಂತೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಆದೇಶ

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಮತ್ತು ನದಿಗಳ ನೀರಿನ ಮಟ್ಟ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಮೇಲೆ ನಿರಂತರ ನಿಗಾ ಇಡಬೇಕು ಎಂದು ಅವರು ಆದೇಶಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !