ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ನವರಿಗೆ ಅವರ ಪಕ್ಷದವರನ್ನೇ ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಲೇವಡಿ ಮಾಡಿದರು.
ಮಲ್ಲೇಶ್ವರದ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ಬೈಠಕ್ ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನೇಕ ಸಚಿವರು, ಶಾಸಕರು ಸರ್ಕಾರದ ವಿರುದ್ಧವೇ ಮಾತನಾಡುತ್ತಿದ್ದಾರೆ. ಮೂರು ತಿಂಗಳಲ್ಲೇ ಅವರ ಸರ್ಕಾರದಲ್ಲಿ ಹಲವು ಸಮಸ್ಯೆಗಳಿವೆ. ಇಂತಹವರೇ ಆಪರೇಷನ್ ಹಸ್ತದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ನವರ ಯಾವ ನಾಟಕವೂ ಇನ್ನು ವರ್ಕೌಟ್ ಆಗಲ್ಲ. ಇವರ ರಾಜಕೀಯ ತಂತ್ರಗಳು ನಡೆಯಲ್ಲ. ನನಗೆ ಗೊತ್ತಿರುವ ಪ್ರಕಾರ ಬಿಜೆಪಿಯಿಂದ ಯಾರೂ ಕಾಂಗ್ರೆಸ್ಗೆ ಹೋಗುವುದಿಲ್ಲ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ನಿಷ್ಕ್ರಿಯ ಆಗಿದೆ. ಕಾಂಗ್ರೆಸ್ ಮುಳುಗುತ್ತಿರುವ ಪಕ್ಷ, ಅಲ್ಲಿಗೆ ಯಾರೂ ಹೋಗಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತು ಸರ್ಕಾರ ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದೆ. ಯಾರೂ ನಮ್ಮ ಪಕ್ಷ ಬಿಟ್ಟು ಹೋಗಲ್ಲ. 135 ಜನ ಗೆದ್ದಿರುವವರನ್ನೇ ಅವರಿಗೆ ನೋಡಿಕೊಳ್ಳಲು ಆಗುತ್ತಿಲ್ಲ. ಅವರ ಪಕ್ಷದಲ್ಲಿರುವವರನ್ನೇ ಸಮರ್ಥನೆ ಮಾಡಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಇಂತಹವರು ಆಪರೇಷನ್ ಹಸ್ತ ಮಾಡುತ್ತಾರಾ? ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನೂ ಬಿಜೆಪಿ ಗೆಲ್ಲುತ್ತದೆ. ಕಾಂಗ್ರೆಸ್ಸಿಗರ ಸರ್ಕಸ್, ಡೊಂಬರಾಟ ಯಾವುದೂ ವರ್ಕ್ ಆಗಲ್ಲ ಎಂದು ತಿರುಗೇಟು ನೀಡಿದರು.