ಆಪರೇಷನ್​ ಹಸ್ತದ ಯಾವ ನಾಟಕವೂ ಫಲಿಸದು: ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಲೇವಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್​ನವರಿಗೆ ಅವರ ಪಕ್ಷದವರನ್ನೇ ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್​ ಅಶ್ವತ್ಥನಾರಾಯಣ ಅವರು ಲೇವಡಿ ಮಾಡಿದರು.

ಮಲ್ಲೇಶ್ವರದ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ಬೈಠಕ್ ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನೇಕ ಸಚಿವರು, ಶಾಸಕರು ಸರ್ಕಾರದ ವಿರುದ್ಧವೇ ಮಾತನಾಡುತ್ತಿದ್ದಾರೆ. ಮೂರು ತಿಂಗಳಲ್ಲೇ ಅವರ ಸರ್ಕಾರದಲ್ಲಿ ಹಲವು ಸಮಸ್ಯೆಗಳಿವೆ. ಇಂತಹವರೇ ಆಪರೇಷನ್​ ಹಸ್ತದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ನವರ ಯಾವ ನಾಟಕವೂ ಇನ್ನು ವರ್ಕೌಟ್​ ಆಗಲ್ಲ. ಇವರ ರಾಜಕೀಯ ತಂತ್ರಗಳು ನಡೆಯಲ್ಲ. ನನಗೆ ಗೊತ್ತಿರುವ ಪ್ರಕಾರ ಬಿಜೆಪಿಯಿಂದ ಯಾರೂ ಕಾಂಗ್ರೆಸ್​ಗೆ ಹೋಗುವುದಿಲ್ಲ. ಕಾಂಗ್ರೆಸ್​ ಸರ್ಕಾರ ಸಂಪೂರ್ಣ ನಿಷ್ಕ್ರಿಯ ಆಗಿದೆ. ಕಾಂಗ್ರೆಸ್​ ಮುಳುಗುತ್ತಿರುವ ಪಕ್ಷ, ಅಲ್ಲಿಗೆ ಯಾರೂ ಹೋಗಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್​ ಮತ್ತು ಸರ್ಕಾರ ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದೆ. ಯಾರೂ ನಮ್ಮ ಪಕ್ಷ ಬಿಟ್ಟು ಹೋಗಲ್ಲ. 135 ಜನ ಗೆದ್ದಿರುವವರನ್ನೇ ಅವರಿಗೆ ನೋಡಿಕೊಳ್ಳಲು ಆಗುತ್ತಿಲ್ಲ. ಅವರ ಪಕ್ಷದಲ್ಲಿರುವವರನ್ನೇ ಸಮರ್ಥನೆ ಮಾಡಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಇಂತಹವರು ಆಪರೇಷನ್​ ಹಸ್ತ ಮಾಡುತ್ತಾರಾ? ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನೂ ಬಿಜೆಪಿ ಗೆಲ್ಲುತ್ತದೆ. ಕಾಂಗ್ರೆಸ್ಸಿಗರ ಸರ್ಕಸ್​, ಡೊಂಬರಾಟ ಯಾವುದೂ ವರ್ಕ್​ ಆಗಲ್ಲ ಎಂದು ತಿರುಗೇಟು ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!