‘ಮುಂಬೈ ದಾಳಿ ಮರೆತಿಲ್ಲ, ಮರೆಯುವುದೂ ಇಲ್ಲ, ʼಉಗ್ರರ ವಿರುದ್ಧ ಸಮರ ನಿರಂತರ: ದಾಳಿಯಲ್ಲಿ ಮಡಿದವರಿಗೆ ರಾಜನಾಥ್, ಜೈಶಂಕರ್ ಶ್ರದ್ಧಾಂಜಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಭಾರತದ ಇತಿಹಾಸದಲ್ಲಿ ಅತ್ಯಂತ ಕೆಟ್ಟದಾದ ಭಯೋತ್ಪಾದಕ ದಾಳಿಗಳು 2008ರ ನವೆಂಬರ್ 26 ರಿಂದ ನವೆಂಬರ್ 29 ರವರೆಗೆ ನಾಲ್ಕು ದಿನಗಳ ಅವಧಿಯಲ್ಲಿ ಸಂಭವಿಸಿದವು. ಇದರಲ್ಲಿ ಭದ್ರತಾ ಸಿಬ್ಬಂದಿ, ನಾಗರಿಕರು ಮತ್ತು ವಿದೇಶಿ ಪ್ರಜೆಗಳು ಸೇರಿದಂತೆ 150 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು.
ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿಗೆ ಪ್ರಸ್ತುತ 14 ವರ್ಷ ಪೂರ್ಣವಾಗುತ್ತಿದೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡ ನೂರಾರು ಜನರಿಗೆ ದೇಶದ ಪ್ರಮುಖ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದರು.
“ಭಯೋತ್ಪಾದನೆ ಮಾನವೀಯತೆಗೆ ಬೆದರಿಕೆ ಹಾಕುತ್ತದೆ. 26/11 ರ ದಾಳಿಯ ಯೋಜನೆ ಮತ್ತು ಮೇಲ್ವಿಚಾರಣೆ ನಡೆಸಿದವರನ್ನು ನ್ಯಾಯಾಂಗದ ಕಟಕಟೆಗೆ ತರಲು ಭಾರತ ಶ್ರಮಿಸುತ್ತಿದೆ. ಜಗತ್ತಿನಾದ್ಯಂತ ಭಯೋತ್ಪಾದನೆಗೆ ಬಲಿಯಾದ ಪ್ರತಿಯೊಬ್ಬರಿಗೂ ನಾವು ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರುಟ್ವೀಟ್ ಮಾಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರೆಲ್ಲರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. “ಈ ದಾಳಿಯ ವಿರುದ್ಧ ಹೋರಾಡುವಾಗ ಪ್ರಾಣ ತ್ಯಾಗ ಮಾಡಿದ ಭದ್ರತಾ ಸಿಬ್ಬಂದಿಗೆ ನನ್ನ ಹೃತ್ಪೂರ್ವಕ ನಮನಗಳು. ʼಈ ದೇಶವು 26/11 ರ ಘಟನೆಯನ್ನು ಮರೆತಿಲ್ಲ ಮತ್ತು ಎಂದಿಗೂ ಮರೆಯುವುದೂ ಇಲ್ಲʼ ಎಂದು ಅವರು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ 26/11 ಮುಂಬೈ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು. “ಭಯೋತ್ಪಾದಕರ ವಿರುದ್ಧ ಹೋರಾಡುವ ಸರ್ವೋಚ್ಚ ತ್ಯಾಗವನ್ನು ಮಾಡಿದ ನಮ್ಮ ಕೆಚ್ಚೆದೆಯ ಭದ್ರತಾ ಸಿಬ್ಬಂದಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ ಮತ್ತು ನಮಸ್ಕರಿಸುತ್ತೇನೆ. ಇಂದು ಇಡೀ ಜಗತ್ತಿಗೆ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಸಂದೇಶವನ್ನು ನೀಡಿದೆ,” ಎಂದು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದ ಇಸ್ಲಾಮಿ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾದ (ಎಲ್‌ಇಟಿ) 10 ಸದಸ್ಯರು ಅರಬ್ಬಿ ಸಮುದ್ರದ ಮೂಲಕ ಮುಂಬೈಗೆ ಪ್ರವೇಶಿಸಿ ಭಾರತದ ಆರ್ಥಿಕ ರಾಜಧಾನಿಯಾದ್ಯಂತ ಅನೇಕ ಸ್ಥಳಗಳಲ್ಲಿ ಸಂಘಟಿತ ದಾಳಿಗಳನ್ನು ನಡೆಸಿದ್ದರು. ತಾಜ್ ಹೋಟೆಲ್ ಅಲ್ಲದೆ, ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಪೋಲ್ಡ್ ಕೆಫೆ, ನಾರಿಮನ್ ಹೌಸ್ ಮತ್ತು ಒಬೆರಾಯ್ ಟ್ರೈಡೆಂಟ್ ದಾಳಿಗಳು ನಡೆದ ಇತರ ಸ್ಥಳಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!