ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ಧ್ರುವತಾರೆ, ‘ಭಾರತ ರತ್ನ’ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನ ಆಧಾರಿತ ಬಯೋಪಿಕ್ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಮಹಾನ್ ಗಾಯಕಿಯ ಪಯಣವನ್ನು ಬೆಳ್ಳಿಪರದೆಯ ಮೇಲೆ ತರಲು ದಕ್ಷಿಣ ಭಾರತದ ದಿಗ್ಗಜ ನಿರ್ಮಾಣ ಸಂಸ್ಥೆಗಳು ಸಿದ್ಧತೆ ನಡೆಸುತ್ತಿವೆ.
ಈ ಐಕಾನಿಕ್ ಪಾತ್ರಕ್ಕೆ ಮೊದಲು ನಟಿ ಸಾಯಿ ಪಲ್ಲವಿ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ‘ರಾಮಾಯಣ’ ಸೇರಿದಂತೆ ಇತರ ಬಹುನಿರೀಕ್ಷಿತ ಸಿನಿಮಾಗಳ ಕಾಲ್ಶೀಟ್ ಹಾಗೂ ಡೇಟ್ಸ್ ಸಮಸ್ಯೆಯಿಂದಾಗಿ ಈ ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆ ನಂತರ ಕನ್ನಡ ನಟಿ ರುಕ್ಮಿಣಿ ವಸಂತ್ ಅವರ ಹೆಸರು ಕೂಡ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಚಿತ್ರತಂಡವು ಕನ್ನಡದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರನ್ನು ಈ ಪ್ರತಿಷ್ಠಿತ ಪಾತ್ರಕ್ಕೆ ಆಯ್ಕೆ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಗಾಂಭೀರ್ಯ, ಸೌಮ್ಯತೆ ಹಾಗೂ ವ್ಯಕ್ತಿತ್ವವನ್ನು ತೆರೆಯ ಮೇಲೆ ತರುವುದು ಸುಲಭದ ಮಾತಲ್ಲ. ಆದರೆ, ವೈವಿಧ್ಯಮಯ ಪಾತ್ರಗಳ ಮೂಲಕ ತಮ್ಮ ಅಭಿನಯ ಕ್ಷಮತೆ ಸಾಬೀತುಪಡಿಸಿರುವ ರಶ್ಮಿಕಾ ಮಂದಣ್ಣಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಅವರ ವೃತ್ತಿಜೀವನದಲ್ಲೇ ಅತ್ಯಂತ ಸ್ಮರಣೀಯ ಸಿನಿಮಾವಾಗುವುದರಲ್ಲಿ ಸಂಶಯವಿಲ್ಲ.
ನ್ನಡದ ಖ್ಯಾತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ತೆಲುಗಿನ ಅಲ್ಲು ಅರವಿಂದ್ ಹಾಗೂ ಬನ್ನಿ ವಾಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಜರ್ಸಿ’ ಹಾಗೂ ‘ಮಳ್ಳಿ ರಾವಾ’ ಖ್ಯಾತಿಯ ಗೌತಮ್ ತಿನ್ನನೂರಿ ಈ ಬಯೋಪಿಕ್ಗೆ ಆಕ್ಷನ್ ಕಟ್ ಹೇಳಲಿದ್ದಾರೆ.
ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜನ್ಮದಿನವಾದ ಸೆಪ್ಟೆಂಬರ್ 16ರಂದು ಚಿತ್ರತಂಡವು ಈ ಬಿಗ್ ಪ್ರಾಜೆಕ್ಟ್ ಅನ್ನು ಅಧಿಕೃತವಾಗಿ ಘೋಷಿಸಲು ಯೋಜಿಸಿದೆ. ಅಂದೇ ಸಿನಿಮಾದ ಶೀರ್ಷಿಕೆ, ತಾಂತ್ರಿಕ ವರ್ಗ ಹಾಗೂ ಇತರ ಪ್ರಮುಖ ಕಲಾವಿದರ ವಿವರಗಳು ಹೊರಬೀಳಲಿವೆ.



