ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಮೆಟ್ರೋಗಳ ಟ್ರ್ಯಾಕ್ ಮೇಲೆ ಹಾರಿ ಆತ್ಮಹತ್ಯೆಗೆ ಶರಣಾಗುವ ಘಟನೆಗಳು ಹೆಚ್ಚಾದ ಬೆನ್ನಲ್ಲೇ, ಜನರ ಸುರಕ್ಷತೆಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಹೊಸ ಕ್ರಮ ಕೈಗೊಂಡಿದೆ.
ಎರಡು ವರ್ಷದಲ್ಲಿ 11ಕ್ಕೂ ಹೆಚ್ಚು ಮಂದಿ ಮೆಟ್ರೋ ಟ್ರ್ಯಾಕ್ಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ಆಯ್ದ ಮೆಟ್ರೋ ನಿಲ್ದಾಣಗಳಿಗೆ ವಿಶೇಷ ಡಿಜಿಟಲ್ ಡಿಸ್ಪ್ಲೇ ಹಾಗೂ ಸೈನ್ಬೋರ್ಡ್ಗಳನ್ನು ಅಳವಡಿಸಲಾಗಿದೆ. ಮೆಟ್ರೋ ನಿಲ್ದಾಣಗಳನ್ನು ಸುರಕ್ಷಿತವಾಗಿಸಲು ಮತ್ತು ಜನರ ಮನಸ್ಥಿತಿಯನ್ನು ಬದಲಾಯಿಸಲು ನಿಮ್ಹಾನ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಿ ವಿಶೇಷ ಜಾಗೃತಿ ಅಭಿಯಾನವನ್ನು ಆರಂಭಿಸಿದೆ.
ಯೋಚನೆ ಬೇಡ, ಚಿಂತೆ ಬಿಡಿ ಮಾತನಾಡಿ, ದಣಿವಾಗೋದು ಸಹಜ, ಸಹಾಯ ಕೇಳೋದೂ ಸಹಜ ಎನ್ನುವ ಸಾಲುಗಳನ್ನು ಬರೆಯಲಾಗಿದೆ. ಆತ್ಮಹತ್ಯೆಯ ಆಲೋಚನೆಯಿಂದ ಮೆಟ್ರೋ ನಿಲ್ದಾಣಕ್ಕೆ ಆಗಮಿಸುವ ಜನರಿಗೆ ಒಂದು ಸಣ್ಣ ಹೋಪ್ ಸಿಕ್ಕರೂ ಜೀವಿಸುವ ಆಸೆ ಬರುತ್ತದೆ. ಅದಕ್ಕಾಗಿ ಈ ಪ್ರಯತ್ನ ಮಾಡಲಾಗಿದೆ.
ಇದರ ಜೊತೆಗೆ ನಿಲ್ದಾಣಗಳ ಪ್ರಮುಖ ಸ್ಥಳಗಳಲ್ಲಿ ಕಾಲ್ ಸೆಂಟರ್ ಸಹಾಯವಾಣಿ ಸಂಖ್ಯೆಗಳನ್ನು ಡಿಸ್ಪ್ಲೇ ಮಾಡಲಾಗಿದೆ. ಯಾವುದೇ ವ್ಯಕ್ತಿ ಮಾನಸಿಕ ಒತ್ತಡದಲ್ಲಿದ್ದರೆ ಅಥವಾ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಆಲೋಚನೆ ಬರುತ್ತಿದ್ದರೆ, ತಕ್ಷಣವೇ ಈ ಸಂಖ್ಯೆಗಳಿಗೆ ಕರೆ ಮಾಡಿ ತಜ್ಞರಿಂದ ಉಚಿತ ಆಪ್ತ ಸಮಾಲೋಚನೆ ಹಾಗೂ ಸಹಾಯ ಪಡೆಯುವಂತೆ ಮನವಿ ಮಾಡಲಾಗಿದೆ.



