ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ನೆರೆಯ ರಾಷ್ಟ್ರ ಭೂತಾನಿನಿಂದ ವಾರ್ಷಿಕವಾಗಿ 17,000 ಟನ್ ಹಸಿ ಅಡಿಕೆಯನ್ನು ಕನಿಷ್ಟ ಆಮದು ಬೆಲೆ ನಿರ್ಭಂಧವಿಲ್ಲದೇ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕಳೆದ ಮೂರ್ನಾಲ್ಕು ವರ್ಷಗಳ ಆಮದು ನಿಷೇಧದಿಂದ ಅಡಿಕೆ ಧಾರಣೆಯೂ ಉತ್ತಮವಾಗಿ ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಅಡಿಕೆ ಬೆಳಗಾರನ ಪಾಲಿಗೆ ಈ ನಿರ್ಧಾರವು ಆತಂಕ ಸೃಷ್ಟಿಸಿದೆ. ವಿದೇಶದಿಂದ ಅಡಿಕೆ ಆಮದು ಪುನಃ ಪ್ರಾರಂಭವಾದರೆ ಸ್ಥಳೀಯ ಅಡಿಕೆಯ ಬೆಲೆ ಕುಸಿದು ಬಿಡಬಹುದು ಎಂಬ ಚಿಂತೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ನೀವು ಗಮನ ಹರಿಸಬೇಕಿರೋ ಕೆಲ ಅಂಶಗಳು ಇಲ್ಲಿದೆ.
ಭೂತಾನ್ ನಿಂದ ಕನಿಷ್ಟ ಆಮದು ಬೆಲೆ(MIP)ಯಿಲ್ಲದೇ ವಾರ್ಷಿಕ 17ಸಾವಿರ ಟನ್ ಹಸಿ ಅಡಿಕೆ ಆಮದು:
ನೆರೆಯ ರಾಷ್ಟ್ರ ಭೂತಾನ್ ನಿಂದ ಕನಿಷ್ಟ ಆಮದು ಬೆಲೆಯಿಲ್ಲದೇ ಸುಮಾರು 17,000 ಟನ್ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಅನುಮತಿಸಲಾಗಿದೆ. ಈ ಹಿಂದೆ ಸ್ಥಳೀಯ ಅಡಿಕೆಗೆ ಪ್ರಾಮುಖ್ಯತೆ ಸಿಗುವಂತೆ ಮಾಡಿ ಅಡಿಕೆ ಬೆಳಗಾರರ ಹಿತ ಕಾಪಾಡುವ ದೃಷ್ಟಿಯಿಂದ ಆಮದಾಗುವ ಅಡಿಕೆಯ ಪ್ರತಿ ಕೆಜಿಗೆ 251ರೂ. ಕನಿಷ್ಟ ಆಮದು ಬೆಲೆ ನಿಗದಿ ಪಡಿಸಲಾಗಿತ್ತು. ಆದರೆ ಭೂತಾನ್ ನಿಂದ ಆಮದು ಮಾಡಿ ಕೊಳ್ಳುವ ಅಡಿಕೆಗೆ ಇದರಿಂದ ವಿನಾಯಿತಿ ನೀಡಲಾಗಿದೆ ಎಂದು ಪಿಟಿಐ ವರದಿ ಹೇಳಿದೆ.
ಈ ಹಿಂದೆ 2006ರಲ್ಲಿ ಸಾಫ್ಟಾ (SAFTA) ದಕ್ಷಿಣ ಏಷ್ಯಾ ಉಚಿತ ವ್ಯಾಪಾರ ಒಪ್ಪಂದ ಹಿನ್ನೆಲೆಯಲ್ಲಿ ಅಡಿಕೆ ಆಮದಿಗೆ ಸರ್ಕಾರ ಅನುಮತಿ ನೀಡಿತ್ತು. ಇದರಿಂದ ವಿದೇಶಿ ಅಡಿಕೆಗಳು ಭಾರತೀಯ ಮಾರುಕಟ್ಟೆ ಪ್ರವೇಶಿಸಿ ಕೋಲಾಹಲ ಸೃಷ್ಟಿಸಿದ್ದವು. ಅಡಿಕೆ ಬೆಲೆ ಕುಸಿದು ರೈತರು ಕಂಗೆಟ್ಟಿದ್ದರು. ನಂತರ 2018ರಲ್ಲಿ ಅಡಿಕೆ ಬೆಳೆಗಾರರ ಹಿತ ಕಾಯಲು 251ರೂ. ಕನಿಷ್ಟ ಆಮದು ಬೆಲೆ(MIP) ನಿಗದಿ ಪಡಿಸಲಾಗಿತ್ತು. ಇದರಿಂದ ಸ್ಥಳೀಯ ಅಡಿಕೆ ಬೆಲೆಗಳಲ್ಲಿ ಏರಿಕೆಯಾಗಿ ಮಾರುಕಟ್ಟೆ ತುಸು ಚೇತರಿಸಿಕೊಂಡಿತ್ತು. ಆದರೆ ಈಗ ಮತ್ತೆ ಭೂತಾನ್ ನಿಂದ ಅಡಿಕೆ ಆಮದಿಗೆ ಅನುಮತಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ನಿರ್ಧಾರ ದಲ್ಲಿರೋದೇನು ?
ಪ್ರಸ್ತುತ ಆಮದಿಗೆ ಅನುಮತಿಸಿರುವ ಭಾರತ ಸರ್ಕಾರದ ನಿರ್ಧಾರಗಳ ಪ್ರಕಾರ 17,000 ಟನ್ ಆಮದಿಗೆ ಅನುಮತಿಸಲಾಗಿದೆ. ಅದು ಕೂಡ ಪಶ್ಚಿಮ ಬಂಗಾಳದ ಜಯಗಾಂವ್ ಬಂದರಿನಿಂದ ಮಾತ್ರವೇ ಎಂಐಪಿ ವಿನಾಯಿತಿಗೆ ಅನುಮತಿಸಲಾಗಿದೆ. ಇದರ ಅನ್ವಯ ಬೆಲೆ ವಿನಾಯಿತಿ ಪಡೆಯಲು ಭೂತಾನ್ ದೇಶದಲ್ಲಿ ಯಾವುದೇ ಬಂದರು ಗಳಿಲ್ಲದಿರುವುದರಿಂದ ಅಡಿಕೆಯನ್ನು ಭೂಮಾರ್ಗದಿಂದ ಸಮುದ್ರಕ್ಕೆ ತಂದು ಅಲ್ಲಿಂದ ಜಯಗಾಂವ್ ಬಂದರಿನ ಮೂಲಕ ಆಮದು ಮಾಡಿಕೊಳ್ಳ ಬೇಕಾಗುತ್ತದೆ. ಹಾಗಾಗಿ ಇದು ಅಡಿಕೆಯ ಸಾಗಣೆ ವೆಚ್ಚವನ್ನು ಹೆಚ್ಚು ತುಟ್ಟಿಯಾಗಿಸುತ್ತದೆ ಎನ್ನಲಾಗಿದೆ.
ಅಲ್ಲದೇ ಕೆಲ ವರದಿಗಳು ಹೇಳುವ ಪ್ರಕಾರ ಭೂತಾನ್ ದೇಶವು ತನ್ನ ಸ್ವಂತ ಬಳಕೆಗೆ ಭಾರತದಿಂದ ಅಡಿಕೆಯನ್ನು ತರಿಸಿಕೊಳ್ಳುತ್ತದೆ. ಆದರೆ ಈಗ ಅದೇ ಭೂತಾನ್ ದೇಶದಿಂದ ಅಡಿಕೆ ಆಮದಿಗೆ ಚಿಂತಿಸಲಾಗುತ್ತಿದೆ.
ಅಡಿಕೆ ಬೆಳೆಗಾರರಲ್ಲಿ ಆತಂಕ:
ಇದರಿಂದಾಗಿ ವಿದೇಶಿ ಅಡಿಕೆಗಳು ಮತ್ತೆ ಭಾರತದ ಮಾರುಕಟ್ಟೆ ಪ್ರವೇಶಿಸಿ ಸ್ಥಳೀಯ ಅಡಿಕೆ ಬೆಲೆಗಳು ಕುಸಿಯಬಹುದು. ಪ್ರಸ್ತುತ 17,000 ಟನ್ ಗೆ ಮಾತ್ರ ಅನುಮತಿಸಲಾಗಿದ್ದರೂ ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಳವಾಗಬಹುದು. ಹಾಗಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಆತಂಕ ಎದುರಾಗಬಹುದು ಎಂಬುದು ರೈತರ ಚಿಂತೆಗೆ ಕಾರಣವಾಗಿದೆ. ಅಲ್ಲದೇ ಈ ಅನುಮತಿಯು ಅಡಿಕೆಯ ಕಳ್ಳಸಾಗಣೆಗೂ ಕಾರಣವಾಗಬಹುದು ಎಂದು ರೈತರು ಅಭಿಪ್ರಾಯ ಪಟ್ಟಿದ್ದಾರೆ.
ಇದಲ್ಲದೇ ಕೆಲ ಅಡಿಕೆ ವರ್ತಕರ ಸಂಘಗಳು ಹಾಗೂ ರೈತರ ಒಕ್ಕೂಟಗಳು ಕನಿಷ್ಟ ಆಮದು ಬೆಲೆಯನ್ನು 251ರೂ.ಗಿಂತ ಏರಿಕೆ ಮಾಡಿ 360 ರೂಪಾಯಿಗೆ ಹೆಚ್ಚಿಸ ಬೇಕು ಎಂದು ಮನವಿ ಮಾಡುತ್ತಿವೆ. ಇಂಥಹ ಸಂದರ್ಭದಲ್ಲಿ ಮತ್ತೆ ಆಮದಿಗೆ ಅನುಮತಿಸಿರುವುದಕ್ಕೆ ಅಡಿಕೆ ಬೆಳೆಗಾರರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ತಜ್ಞರು ಹೇಳೋದೇನು ?
ಕೆಲವು ತಜ್ಞರು ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಪ್ರಸ್ತುತ ಹಸಿ ಅಡಿಕೆ ತರಿಸಿಕೊಳ್ಳಲು ಮಾತ್ರವೇ ಅನುಮತಿಸಲಾಗಿದೆ. ಹಸಿ ಅಡಿಕೆಯನ್ನು ಸುಲಿದು ಸಂಸ್ಕರಿಸಿ ಅಂತಿಮ ಉತ್ಪನ್ನ ಒಣ ಅಡಿಕೆಯನ್ನಾಗಿ ಪರಿವರ್ತಿಸುವ ಹೊತ್ತಿಗೆ ಅದರ ಪ್ರಮಾಣ ಹೆಚ್ಚೆನು ಆಗದು. ಭೂತಾನ್ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಅಡಿಕೆ ಪರಿಚಯಿಸಿರುವುದರಿಂದ ಅಲ್ಲಿನ ಅಡಿಕೆಗಳ ಗುಣಮಟ್ಟವೂ ಚೆನ್ನಾಗಿಲ್ಲ. ಹಾಗಾಗಿ ಒಂದು ಕ್ವಿಂಟಾಲ್ ಹಸಿ ಅಡಿಕೆಯಲ್ಲು ಕಾಲು ಭಾಗಕ್ಕಿಂತಲೂ ಕಡಿಮೆ ಒಣ ಅಡಿಕೆ ಸಿಗುವುದರಿಂದ ಇದು ಮಾರುಕಟ್ಟೆಯಲ್ಲಿ ಹೆಚ್ಚೇನೂ ಪರಿಣಾಮ ಬೀರಲಾರದು.
ಇದಲ್ಲದೇ ಭಾರತದಲ್ಲಿ ಕರ್ನಾಟಕವು ಅಡಿಕೆ ಬೆಳೆಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು ಇಲ್ಲಿನ ಅಡಿಕೆ ಉತ್ಕೃಷ್ಟ ಗುಣಮಟ್ಟದ್ದಾಗಿರುವುದರಿಂದ ಹೆಚ್ಚೇನೂ ಆತಂಕ ಪಡಬೇಕಿಲ್ಲ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.