ಹೊಸ ತಂತ್ರಗಳ ಮೊರೆ ಹೋದ ಕಾಂಗ್ರೆಸ್​​: ಇದೇ ವರ್ಷ ‘ಭಾರತ್ ಜೋಡೋ’ ಪಾದಯಾತ್ರೆ ಎಂದ ಸೋನಿಯಾ ಗಾಂಧಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಮತ್ತೆ ಹಳಿಗೆ ಮರಳಲು ಕಾಂಗ್ರೆಸ್​​ ಹೊಸ ತಂತ್ರಗಳ ಮೊರೆ ಹೋಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಒಳಗೊಂಡ ಸಲಹಾ ಸಮಿತಿ ರಚನೆ ಮಾಡುವುದಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಘೋಷಿಸಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆದ 3 ದಿನಗಳ ನವ ಸಂಕಲ್ಪ ಚಿಂತನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕೀಯ ವಿಷಯಗಳ ಕುರಿತು ಚರ್ಚಿಸಲು ನಿಯಮಿತವಾಗಿ ಸಭೆ ಸೇರುವ ಸಿಡಬ್ಲ್ಯುಸಿ ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ಇದಾಗಿರಲಿದೆ. ಇದರಿಂದ ಪಕ್ಷದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು ನೆರವಾಗಲಿದೆ. ಆದರೆ, ಈ ಸಮಿತಿಗೆ ನಿರ್ಧಾರ ಕೈಗೊಳ್ಳುವ ಯಾವುದೇ ಅಧಿಕಾರ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಪಕ್ಷದಲ್ಲಿ ಅಗತ್ಯವಾಗಿರುವ ಆಂತರಿಕ ಸುಧಾರಣೆಗಳ ಪ್ರಕ್ರಿಯೆಗೆ ಚಾಲನೆ ನೀಡಲು ಟಾಸ್ಕ್​​ಫೋರ್ಸ್​ ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯನ್ನು ಕೇಂದ್ರೀಕರಿಸುವ ಈ ಸುಧಾರಣೆ ಕ್ರಮಗಳನ್ನು ಮಾಡಲಾಗುತ್ತದೆ.ಸಂಘಟನೆ, ಪಕ್ಷದ ಹುದ್ದೆಗಳಿಗೆ ನೇಮಕಾತಿ ನಿಯಮಗಳು, ಸಂವಹನ ಮತ್ತು ಪ್ರಚಾರ, ಹಣಕಾಸು ಹಾಗೂ ಚುನಾವಣಾ ನಿರ್ವಹಣೆ ಸೇರಿದಂತೆ ಸಂಘಟನೆಯ ಎಲ್ಲ ಅಂಶಗಳನ್ನು ಟಾಸ್ಕ್​​ಫೋರ್ಸ್ ಒಳಗೊಂಡಿರುತ್ತವೆ ಎಂದು ತಿಳಿಸಿದ್ದಾರೆ.

ಈ ಟಾಸ್ಕ್​​ಫೋರ್ಸ್​ ರಚನೆ ಬಗ್ಗೆ ಎರಡ್ಮೂರು ದಿನಗಳಲ್ಲಿ ತಿಳಿಸಲಾಗುವುದು. ಜೊತೆಗೆ ಚಿಂತನಾ ಶಿಬಿರವು ಅತ್ಯಂತ ಪ್ರಯೋಜನಕಾರಿ ಹಾಗೂ ಉಪಯುಕ್ತವಾದ ರೀತಿಯಲ್ಲಿ ನಡೆದಿದೆ. ಬಹುತೇಕ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಭೆಯು ವೇದಿಕೆಯಾಗಿದೆ ಎಂದು ಭಾವಿಸಿದ್ದೇನೆ. ನಿಮ್ಮ ಅಗತ್ಯ ಸಲಹೆಗಳನ್ನು ಸ್ವೀಕರಿಸಿ ಅದನ್ನು ಜಾರಿಗೆ ತರಲು ಪ್ರಯತ್ನಿಸುವಾಗಿಯೂ ಸೋನಿಯಾ ಹೇಳಿದ್ದಾರೆ.

ಭಾರತ್ ಜೋಡೋ ಪಾದಯಾತ್ರೆ:

ನಮ್ಮ ಪಕ್ಷದ ನಿಲುವುಗಳು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ತಿಳಿಸಲಾಗಿದ್ದು, ಅವುಗಳು ರಾಜ್ಯ ಮತ್ತು ರಾಷ್ಟ್ರದ ಮಟ್ಟದ ಚುನಾವಣಾ ಪ್ರಣಾಳಿಕೆಗಳನ್ನು ತಯಾರಿಸಲು ಮೌಲ್ಯಯುತವಾಗಿವೆ. ವಿಶೇಷವಾಗಿ ಇದೇ ವರ್ಷದ ಗಾಂಧಿ ಜಯಂತಿಯಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್​​ ‘ಭಾರತ್ ಜೋಡೋ’ ಪಾದಯಾತ್ರೆಯನ್ನು ಪ್ರಾರಂಭಿದೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

ನಾವೆಲ್ಲರೂ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದೇವೆ. ಸಾಮಾಜಿಕ ಸಾಮರಸ್ಯದ ಬಂಧಗಳನ್ನು ಬಲಪಡಿಸಲು, ಆಕ್ರಮಣಕ್ಕೊಳಗಾಗಿರುವ ನಮ್ಮ ಸಂವಿಧಾನದ ಮೂಲ ಮೌಲ್ಯಗಳನ್ನು ಕಾಪಾಡಲು ಮತ್ತು ಕೋಟ್ಯಂತರ ಜನರ ದೈನಂದಿನ ಕಾಳಜಿಯನ್ನು ಎತ್ತಿ ಹಿಡಿಯಲು ಯಾತ್ರೆಯ ಉದ್ದೇಶವಾಗಿದೆ. ಜಿಲ್ಲಾ ಮಟ್ಟದ ಜನ ಜಾಗರಣ ಅಭಿಯಾನಯ ಎರಡನೇ ಹಂತವು ಜೂನ್ 15ರಂದು ಪುನರಾರಂಭವಾಗಲಿದೆ.ಈ ಅಭಿಯಾನವು ದೇಶದ ಆರ್ಥಿಕ ಸಮಸ್ಯೆಗಳನ್ನು ಎತ್ತಿ ತೋರಿಸಲಿದೆ. ವಿಶೇಷವಾಗಿ ನಿರುದ್ಯೋಗ ಮತ್ತು ಬೆಲೆ ಏರಿಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಅನಕೂಲವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!