ಹೊಸದಿಗಂತ ವರದಿ, ಗದಗ:
ನ್ಯಾಯಾಲಯದಲ್ಲಿ ಕಲಾಪ ಮುಗಿಸಿ, ಬೇಕರಿಯಲ್ಲಿ ತಿನಿಸು ತೆಗೆದುಕೊಂಡು ಹೊರಬರುತ್ತಿದ್ದ ಸಂದರ್ಭದಲ್ಲಿ ಇಬ್ಬರು ಯುವಕರು ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ಮುಳಗುಂದ ನಾಕಾ ಬಳಿ ಸೋಮವಾರ ಮಧ್ಯಾಹ್ನ ಜರುಗಿದೆ. ಇದರಿಂದ ಅವಳಿ ನಗರ ತಲ್ಲಣಗೊಂಡಿದೆ.
ಘಟನೆ ವಿವರ : ಮೂಲತಃ ಸಿಂಗಟಾಲಕೇರಿ ತಾಂಡಾದ ಶೋಭಾ ಲಮಾಣಿ ಉರ್ಪ ಮೀನಾಜ್ ಬೇಪಾರಿ ಕೊಲೆಯಾದ ಮಹಿಳೆ. ಹಳೇ ದ್ವೇಷದ ಹಿನ್ನೆಲೆ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆರೋಪಿಗಳಾದ ಚೇತನಕುಮಾರ ಹುಳಕಣ್ಣವರ ಮತ್ತು ರೋಹನಕುಮಾರ ಹುಳಕಣ್ಣವರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಚೇತನಕುಮಾರ ಅವರ ಅಣ್ಣ ರಮೇಶ ಅವರನ್ನು ೨೦೨೦ ರಲ್ಲಿ ಕೊಲೆ ಮಾಡಲಾಗಿತ್ತು. ಈಗ ಹತ್ಯೆಯಾದ ಶೋಭಾ ಉರ್ಫ ಮೀನಾಜ್ ಹಾಗೂ ಆಕೆಯ ಗಂಡ ವಾಸೀಮ್ ಬೇಪಾರಿ ಅವರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಶೋಭಾ ಉರ್ಫ ಮೀನಾಜ್ ಅವರನ್ನು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.