ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಪತ್ನಿಯಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಸಚ್ದೇವ ಹಾಗೂ ವಿಕಾಸ್ ಮಹಾಜನ್ ಅವರಿದ್ದ ಪೀಠ ಒಮರ್ ಅಬ್ದುಲ್ಲಾ ಅವರಿಗೆ ವಿಚ್ಛೇದನ ನೀಡಲು ನಿರಾಕರಿಸಿ, ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಿತು. ಅವರ ಕೋರಿಕೆಯಲ್ಲಿ ಯಾವುದೇ ಮಾನ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.
2016ರ ಆಗಸ್ಟ್ 30ರಂದು ಕೆಳ ನ್ಯಾಯಾಲಯವು ವಿಚ್ಛೇದನ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಒಮರ್ ಹೈಕೋರ್ಟ್ ಮೆಟ್ಟಿಲೇರಿದ್ದರು.ಪತ್ನಿ ಪಾಯಲ್ ಅಬ್ದುಲ್ಲಾರಿಂದ ತಾನು ದೌರ್ಜನ್ಯಕ್ಕೊಳಗಾಗಿದ್ದು, ಹೀಗಾಗಿ ವಿಚ್ಛೇದನಕ್ಕೆ ಅನುಮತಿಸಬೇಕು ಎಂದು ಒಮರ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
‘ಒಮರ್ ಅಬ್ದುಲ್ಲಾ ಮಾಡಿರುವ ಕ್ರೌರ್ಯದ ಆರೋಪಗಳು ಅಸ್ಪಷ್ಟವಾಗಿದೆ ಮತ್ತು ಸ್ವೀಕಾರಾರ್ಹವಲ್ಲ ಎಂದು ಕೌಟುಂಬಿಕ ವ್ಯಾಜ್ಯಗಳ ನ್ಯಾಯಾಲಯ ತೆಗೆದುಕೊಂಡ ನಿರ್ಣಯದಲ್ಲಿ ಯಾವುದೇ ದೋಷ ಕಾಣಿಸುತ್ತಿಲ್ಲ. ಮಾನಸಿಕವಾಗಿ ಅಥವಾ ದೈಹಿಕವಾಗಿ ಕ್ರೌರ್ಯದ ಕ್ರಿಯೆ ಎಂದು ಕರೆಯಬಹುದಾದದ ಯಾವುದೇ ಕೃತ್ಯವನ್ನು ಸಾಬೀತುಪಡಿಸಲು ಅರ್ಜಿದಾದರು ವಿಫಲರಾಗಿದ್ದಾರೆ’ ಎಂದು ಕೋರ್ಟ್ ಹೇಳಿದೆ.