ಹೊಸದಿಗಂತ ವರದಿ ಹಾಸನ :
ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಜೀವನಾಧಾರಿತ “ಕರಿನೀರ ವೀರ” ನಾಟಕ ಪ್ರದರ್ಶನವನ್ನು ನ. 23 ರಂದು ಆಯೋಜನೆ ಮಾಡಲಾಗಿದೆ ಎಂದು ರಾಷ್ಟ್ರೋದಯ ಸೇವಾ ಚಾರಿಟೇಬಲ್ ಟ್ರಸ್ಟ್ ನಅಧ್ಯಕ್ಷರಾದ ಚೇತನ್ ನಾರಾಯಣ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಜೀವನಾಧಾರಿತ “ಕರಿನೀರ ವೀರ” ನಾಟಕ ಪ್ರದರ್ಶನವು ಈಗಾಗಲೇ ರಾಜ್ಯಾದ್ಯಂತ ಹನ್ನೆರಡು ಪ್ರದರ್ಶನ ಕಂಡಿದೆ. ಮೈಸೂರು, ಬೆಂಗಳೂರು, ಮಂಡ್ಯದಲ್ಲಿ ಚಾಮರಾಜನಾಗರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ರಾಷ್ಟ್ರೋದಯ ಸೇವಾ ಚಾರಿಟೇಬಲ್ ಟ್ರಸ್ಟ್(ರಿ), ಸಾವರ್ಕರ್ ಪ್ರತಿಷ್ಠಾನ ಮೈಸೂರು(ರಿ) ವತಿಯಿಂದ ಹಾಸನದಲ್ಲಿ “ಕರಿನೀರ ವೀರ” ನಾಟಕ ಪ್ರದರ್ಶನವನ್ನು ಇದೇ ನ.23 ರಂದು ಸಂಜೆ 6 ಗಂಟೆಗೆ ನಗರದ ಕಲಾಭವನದಲ್ಲಿ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಮೈಸೂರು ಸಾವರ್ಕರ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಯಶಸ್ವಿನಿ ಅವರು ಮಾತನಾಡಿ, ಕರಿನೀರ ವೀರ ನಾಟಕವನ್ನು ಮೈಸೂರಿನ ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಸಿ ಕಾರಿಯಪ್ಪ ರಚಿಸಿ ನಿರ್ದೇಶಿಸಿದ್ದಾರೆ. ಈಗಾಗಲೇ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿರುವ ಈ ಪ್ರದರ್ಶನವು 3 ಗಂಟೆಗಳ ಕಾಲ ಪ್ರದರ್ಶನ ನಡೆಯಲಿದೆ. ಮಹಾತ್ಮ ಗಾಂಧೀಜಿಯವರ ಹತ್ಯೆಯಿಂದ ಸಂಸತ್ ವರೆಗೂ ಈ ನಾಟಕ ಪ್ರದರ್ಶನ ಕೊಂಡೋಯ್ಯುತ್ತದೆ. ಸಾವರ್ಕರ್ ರವರ ಜೈಲು ವಾಸದ ವೇಳೆ ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಚಿತ್ರ ಹಿಂಸೆ, ಸ್ವಾತಂತ್ರ್ಯ ಭಾರತದಲ್ಲಿಯೂ ಅನುಭವಿಸಿದ ಕಷ್ಟ – ನಷ್ಟಗಳು, ಸಮಾನತೆಗಾಗಿ ನಡೆಸಿದ ಹೋರಾಟಗಳನ್ನು ಕಥೆ ಒಳಗೊಂಡಿದೆ ಎಂದರು.
ರಾಜಕೀಯ ದುರುದ್ದೇಶದಿಂದ ಮಾತನಾಡುವ ಜನಗಳು ಸಾವರ್ಕರ್ ಏನು ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಹಾಗೂ ಸಾವರ್ಕರ್ ಅವರು ನೈಜ ಜೀವನವನ್ನು ಪ್ರತಿಯೊಬ್ಬರಿಗೂ ತಿಳಿಸುವ ಉದ್ದೇಶದಿಂದ ಈ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ವಿರೋಧಿಗಳು ಮಾಡುವ ಟೀಕೆಗಳಿಗೆ ಈ ನಾಟಕ ಪ್ರದರ್ಶನದಲ್ಲಿ ಉತ್ತರವಿದೆ. ವೀರ ಸಾರ್ವಕರ್ ಅವರ ಜೀವನ ಚರಿತ್ರೆಯನ್ನು ಸಾರುವಂತಹ ಪರಿಕಲ್ಪನೆಯಾಗಿರುವ ಈ ನಾಟಕ ಪ್ರದರ್ಶನವನ್ನು ಪ್ರತಿಯೊಬ್ಬ ದೇಶ ಭಕ್ತನು ನೋಡಲೇಬೇಕಾದ ಒಂದು ಪ್ರದರ್ಶನವಾಗಿದೆ. ನೂರು ರೂ ಪ್ರದರ್ಶನದ ಟಿಕೆಟ್ ಶುಲ್ಕವನ್ನು ಮಾಡಲಾಗಿದೆ. ಟಿಕೆಟ್ ಹಾಗೂ ಹೆಚ್ಚಿನ ಮಾಹಿತಿಗಾಗಿ 9731598989/9886090527 ಸಂಖ್ಯೆಗೆ ಸಂಪರ್ಕಿಸಬಹುವುದು ಎಂದು ತಿಳಿಸಿದರು.
ಬಿಜೆಪಿ ನಗರದ ಮಂಡಲ ಅಧ್ಯಕ್ಷರಾದ ವೇಣುಗೋಪಾಲ್ ಮಾತನಾಡಿ ರಾಷ್ಟ್ರೋದಯ ಸೇವಾ ಚಾರಿಟೇಬಲ್ ಟ್ರಸ್ಟ್(ರಿ) ಒಂದು ವರ್ಷದಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ವಿಧ್ಯಾರ್ಥಿಗಳಿಗೆ ಅನುಕೂಲ ಆಗುವನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಯಶಸ್ವಿಗೊಳಿಸಿದೆ. ಸನಾತನ ಧರ್ಮ, ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಪ್ರಸ್ತುತ ಹಾಸನದಲ್ಲಿರುವ ಕೊಳಚೆಪ್ರದೇಶಗಳಲ್ಲಿರುವ ಮಕ್ಕಳಿಗೆ ಗಣಿತ ಮತ್ತು ವಿಜ್ಮಾನ ವಿಷಯಗಳಲ್ಲಿ ಟ್ಯೂಷನ್ ಮಾಡುವ ಕೆಲಸವನ್ನು ಟ್ರಸ್ಟ್ ವತಿಯಿಂದ ಮಾಡಲು ನಿರ್ಧರಿಸಲಾಗಿದೆ ಎಂದು ತಮ್ಮ ಯೋಜನೆಗಳ ಬಗ್ಗೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂದೇಶ್, ಅನಿಲ್, ನಾಗೇಂದ್ರ ಸೇರಿದಂತೆ ಇತರರು ಹಾಜರಿದ್ದರು.