‘ಒಂದು ಭೂಮಿ’, ‘ಒಂದು ಕುಟುಂಬ’ ‘ಒಂದು ಭವಿಷ್ಯ’: ಜಿ20 ಶೃಂಗಸಭೆಯ ದೃಷ್ಟಿಕೋನ ಎಂದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೆಹಲಿಯ ಭಾರತ್ ಮಂಟಪದಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು18 ನೇ ಜಿ20 ಶೃಂಗಸಭೆಯನ್ನು (G20 Summit) ಆಯೋಜಿಸಲು ಭಾರತವು ಉತ್ಸುಕವಾಗಿದೆ. ಇದು ಭಾರತ ಆಯೋಜಿಸುತ್ತಿರುವ ಮೊದಲ ಜಿ20 ಶೃಂಗಸಭೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ವಿಶ್ವ ನಾಯಕರೊಂದಿಗೆ ಫಲಪ್ರದ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ಸುಸ್ಥಿರ ಮತ್ತು ಸಮಾನತೆಯಿಂದ ಕೂಡಿದ ಒಂದು ಭವಿಷ್ಯ, ಜತೆಯಾಗಿ ಒಂದು ಕುಟುಂಬ ಹಾಗೂ ಆರೋಗ್ಯಕರ ಒಂದು ಭೂಮಿ’ ಎಂಬ ವಿಷಯದ ಮೇಲೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಜಿ20 ಶೃಂಗಸಭೆಯ ಸಮಯದಲ್ಲಿ, ವಿಶ್ವ ಸಮುದಾಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ವ್ಯಾಪ್ತಿಯನ್ನು ಒಳಗೊಂಡಿರುವ ‘ಒಂದು ಭೂಮಿ’, ‘ಒಂದು ಕುಟುಂಬ’ ಮತ್ತು ‘ಒಂದು ಭವಿಷ್ಯ’ ಕುರಿತು ಅಧಿವೇಶನಗಳ ಅಧ್ಯಕ್ಷತೆ ವಹಿಸಲಿದ್ದೇನೆ. ಇವುಗಳಲ್ಲಿ ಬಲವಾದ, ಸಮರ್ಥನೀಯ, ಅಂತರ್ಗತ ಮತ್ತು ಸಮತೋಲಿತ ಬೆಳವಣಿಗೆಯನ್ನು ಮುಂದುವರಿಸುವುದೂ ಕೂಡ ಸೇರಿದೆ.ಸುಸ್ಥಿರ ಅಭಿವೃದ್ಧಿ ಗುರಿ (SDG) ಗೆ ಸಂಬಂಧಿತ ಪ್ರಗತಿಯನ್ನು ಚುರುಕುಗೊಳಿಸಲು ನಾವು ಬಯಸುತ್ತೇವೆ. ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ ಮತ್ತು 21 ನೇ ಶತಮಾನಕ್ಕೆ ಬಹುಪಕ್ಷೀಯ ಸಂಸ್ಥೆಗಳನ್ನು ಬಲಪಡಿಸಲಿದ್ದೇವೆ ಎಂದು ಮೋದಿ ಉಲ್ಲೇಖಿಸಿದ್ದಾರೆ.

ತಾಂತ್ರಿಕ ರೂಪಾಂತರ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳಂತಹ ಭವಿಷ್ಯದ ಕ್ಷೇತ್ರಗಳಿಗೆ ನಾವು ಅಪಾರ ಆದ್ಯತೆಯನ್ನು ನೀಡುತ್ತಿದ್ದೇವೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಮತ್ತು ವಿಶ್ವ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮೋದಿ ಹೇಳಿದ್ದಾರೆ.

ಸ್ನೇಹ ಮತ್ತು ಸಹಕಾರದ ಬಂಧಗಳನ್ನು ಇನ್ನಷ್ಟು ಗಾಢಗೊಳಿಸಲು ನಾನು ಹಲವಾರು ನಾಯಕರು ಮತ್ತು ನಿಯೋಗದ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುತ್ತೇನೆ. ನಮ್ಮ ಅತಿಥಿಗಳು ಭಾರತೀಯ ಶ್ರೇಷ್ಠ ಆತಿಥ್ಯವನ್ನು ಆನಂದಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ರಾಷ್ಟ್ರಪತಿಗಳು ಸೆಪ್ಟೆಂಬರ್ 9 ರಂದು ಔತಣಕೂಟವನ್ನು ಆಯೋಜಿಸಲಿದ್ದಾರೆ. 10ರಂದು ರಾಜ್‌ಘಾಟ್‌ನಲ್ಲಿ ನಾಯಕರು ಗಾಂಧೀಜಿ ಅವರಿಗೆ ನಮನ ಸಲ್ಲಿಸಲಿದ್ದಾರೆ. ಅದೇ ದಿನ ಸಮಾರೋಪ ಸಮಾರಂಭದಲ್ಲಿ, ‘ಒಂದು ಭೂಮಿ’, ‘ಒಂದು ಕುಟುಂಬ’ ಮತ್ತು ‘ಒಂದು ಭವಿಷ್ಯ’ದ ಕುರಿತ ದೃಷ್ಟಿಕೋನವನ್ನು ಜಿ 20 ನಾಯಕರು ಹಂಚಿಕೊಳ್ಳಲಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!