ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ನಡೆಸಿದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯಲ್ಲಿ ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ನಿಷೇಧಿತ ಜೈಷ್-ಇ-ಮೊಹಮ್ಮದ್ (JeM) ಉಗ್ರ ಸಂಘಟನೆ ಸ್ಥಾಪಕ ಮಸೂದ್ ಅಜಾರ್ ಸಹೋದರ ಹಾಗೂ IC-814 ವಿಮಾನ ಹೈಜಾಕ್ ಮಾಸ್ಟರ್ ಮೈಂಡ್ ಅಬ್ದುಲ್ ರವೂಫ್ ಅಜರ್ ಆಲಿಯಸ್ ಮುಫ್ತಿ ಅಬ್ದುಲ್ ರವೂಫ್ ಅಜರ್ ಹತ್ಯೆಯಾಗಿದೆ.
ಬಹವಾಲ್ಪುರದಲ್ಲಿ ನಡೆಸಿದ ಏರ್ಸ್ಟ್ರೈಕ್ ವೇಳೆ ಜೈಶ್-ಎ-ಮೊಹಮದ್ ಸಂಘಟನೆಯ ಅಜರ್ ಮಸೂದ್ನ ಕುಟುಂಬದ 13 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಅಜರ್ ಮಸೂದ್ ಸಹೋದರ ಅಬ್ದುಲ್ ರೌಫ್ ಕೂಡ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಭಾರತೀಯ ಸೇನಾಪಡೆಗಳು ಪಂಜಾಬ್ ಪ್ರಾಂತ್ಯದ ಜೆಎಂನ ಬಹವಾಲ್ಪುರ್ ನ ಪ್ರಮುಖ ಕೇಂದ್ರ ಮತ್ತು ಲಷ್ಕರ್-ಎ-ತೊಯ್ಬಾದ ಪ್ರಧಾನ ಕಛೇರಿ ಮುರಿಡ್ಕೆಯಲ್ಲಿ ವೈಮಾನಿಕ ದಾಳಿ ನಡೆಸಿ, ಅವುಗಳನ್ನು ನಾಶಪಡಿಸಿತ್ತು. ಧೀರ್ಘಕಾಲದಿಂದ ಇಲ್ಲಿಂದಲೇ ಉಗ್ರರಿಗೆ ತರಬೇತಿ ನೀಡುವ ಮೂಲಕ ಭಾರತದ ಮೇಲೆ ದಾಳಿ ನಡೆಸಲಾಗುತಿತ್ತು.
ಅಬ್ದುಲ್ ರೌಫ್ ಅಜರ್ ಕಂದಹಾರ್ ವಿಮಾನ ಹೈಜಾಕ್ ಮಾತ್ರವಲ್ಲದೆ, ಉರಿ, ಪುಲ್ವಾಮಾ, ಪಠಾಣ್ಕೋಟ್ ಭಯೋತ್ಪಾದಕ ದಾಳಿ, 2001ರ ಸಂಸತ್ ದಾಳಿ, ಅಕ್ಷರಧಾಮ ದಾಳಿಯಲ್ಲೂ ಭಾಗಿಯಾಗಿದ್ದನು.
ವಾಲ್ ಸ್ಟ್ರೀಟ್ ಜರ್ನಲ್ನ ಅಮೇರಿಕನ್-ಯಹೂದಿ ಪತ್ರಕರ್ತ ಡೇನಿಯಲ್ ಪರ್ಲ್ ಅವರನ್ನು ಅಪಹರಿಸಿ ಹತ್ಯೆ ಮಾಡಲು ಹೋಗಿದ್ದ ಆಲ್ ಕೈದಾ ಉಗ್ರ ಓಮರ್ ಸಯೀದ್ ಶೇಖ್ ಬಿಡುಗಡೆಗೆ ಕಂದಹಾರ್ ನಲ್ಲಿ IC-814 ವಿಮಾನ ಅಪಹರಣ ಮಾಡುವಲ್ಲಿ ರವೂಫ್ ಅಜರ್ ಪ್ರಮುಖ ಪಾತ್ರ ವಹಿಸಿದ್ದ. ಇದು ಪಾಕ್ ರಕ್ಷಿತ ಭಯೋತ್ಪಾದಕ ಜಾಲಗಳಿಂದ ಜಾಗತಿಕ ಬೆದರಿಕೆಗೆ ಒಂದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
1999 ರಲ್ಲಿ ಡಿಸೆಂಬರ್ನಲ್ಲಿ ಕಠ್ಮಂಡುವಿನಿಂದ ದೆಹಲಿಗೆ ತೆರಳುತ್ತಿದ್ದ IC-814 ಇಂಡಿಯನ್ ಏರ್ಲೈನ್ಸ್ ವಿಮಾನವನ್ನು ಹರ್ಕತ್-ಉಲ್-ಮುಜಾಹಿದ್ದೀನ್ನ ಐವರು ಭಯೋತ್ಪಾದಕರು ಹೈಜಾಕ್ ಮಾಡಿ, ತಾಲಿಬಾನ್-ನಿಯಂತ್ರಿತ ಅಫ್ಘಾನಿಸ್ತಾನಕ್ಕೆ ಕೊಂಡೊಯ್ಯಲಾಗಿತ್ತು. ವಿಮಾನದಲ್ಲಿ ಪ್ರಯಾಣಿಕರನ್ನು ವಿನಿಮಯ ಮಾಡಿಕೊಳ್ಳುವ ಭಾಗವಾಗಿ ಮಸೂದ್ ಅಜರ್ನನ್ನು ಜಮ್ಮು ಮತ್ತು ಕಾಶ್ಮೀರ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.ತದನಂತರ ಮಸೂದ್ ಅಜರ್ ಜೈಷ್-ಇ-ಮೊಹಮ್ಮದ್ (JeM) ಉಗ್ರ ಸಂಘಟನೆ ಸ್ಥಾಪಿಸಿದ್ದ. ಇದು 2001 ರ ಸಂಸತ್ ದಾಳಿ ಸೇರಿದಂತೆ ಭಾರತದ ನೆಲದಲ್ಲಿ ಹಲವಾರು ದಾಳಿಗಳನ್ನು ನಡೆಸಿತು.