ಮುಸ್ಲಿಂ ವೋಟ್‌ಬ್ಯಾಂಕ್ ಓಲೈಸಲು ಆಪರೇಷನ್ ಸಿಂದೂರ್, ವಕ್ಫ್ ಕಾಯ್ದೆಗೆ ವಿರೋಧ: ದೀದಿ ವಿರುದ್ಧ ಶಾ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮುಸ್ಲಿಂ ಮತ ಬ್ಯಾಂಕ್ ಓಲೈಸಲು ಆಪರೇಷನ್ ಸಿಂದೂರ್ ಮತ್ತು ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿರೋಧಿಸುತ್ತಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಅವರು ವಾಗ್ದಾಳಿ ನಡೆಸಿದ್ದಾರೆ.

ಕೋಲ್ಕತ್ತಾದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಬೃಹತ್‌ ಸಭೆ ಉದ್ದೇಶಿಸಿ ಮಾತನಾಡಿದ ಅವರು,ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಂಗಾಳದ ಪ್ರವಾಸಿಗರು ಸಾವನ್ನಪ್ಪಿದಾಗ, ಮಮತಾ ಬ್ಯಾನರ್ಜಿ ಮೌನವಾಗಿದ್ದರು. ಮುರ್ಷಿದಾಬಾದ್ ಗಲಭೆಗಳು ರಾಜ್ಯ ಪ್ರಾಯೋಜಿತವಾಗಿದ್ದವು. ಗೃಹ ಸಚಿವಾಲಯ ಇಲ್ಲಿ ಬಿಎಸ್‌ಎಫ್ ಅನ್ನು ನಿಯೋಜಿಸುವ ಬಗ್ಗೆ ಮಾತನಾಡಿತ್ತು. ಆದರೆ ಮಮತಾ ಸರ್ಕಾರ ಅಡ್ಡಿಪಡಿಸಿತು. ಆದ್ದರಿಂದ ಹಿಂಸಾಚಾರ ನಡೆಯಿತು ಎಂದು ಶಾ ಹೇಳಿದ್ದಾರೆ.

ಮುಸ್ಲಿಂ ಮತ ಬ್ಯಾಂಕ್ ಅನ್ನು ಓಲೈಸಲು ಮಮತಾ ಅವರು ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ವಿರೋಧಿಸುತ್ತಿದ್ದಾರೆ. ಈ ಮೂಲಕ ದೇಶದ ತಾಯಂದಿರು ಮತ್ತು ಸಹೋದರಿಯರನ್ನು ಅವಮಾನಿಸುತ್ತಿದ್ದಾರೆ. 2026ರ ವಿಧಾನಸಭೆ ಚುನಾವಣೆಯಲ್ಲಿ ಜನರು ತೃಣಮೂಲ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹರಿಹಾಯ್ದರು.

ಮುರ್ಷಿದಾಬಾದ್ ಹಿಂಸಾಚಾರದ ಕುರಿತು ಮಾತನಾಡಿದ ಅಮಿತ್ ಶಾ, ಗಲಭೆಯಲ್ಲಿ ಹಲವಾರು ಹಿರಿಯ ಟಿಎಂಸಿ ನಾಯಕರು ಭಾಗಿಯಾಗಿದ್ದಾರೆ. ಇವೆಲ್ಲವೂ ಸರ್ಕಾರಿ ಪ್ರಾಯೋಜಿತವಾಗಿದ್ದವು. ಗಲಭೆಯ ವೇಳೆ ಗೃಹ ಸಚಿವಾಲಯ ಬಿಎಸ್‌ಎಫ್ ನಿಯೋಜನೆಯ ಬಗ್ಗೆ ಒತ್ತಾಯಿಸುತ್ತಲೇ ಇತ್ತು. ಆದರೆ ಟಿಎಂಸಿ ಸರ್ಕಾರ ಹಿಂಸಾಚಾರ ಮುಂದುವರಿಯಲಿ ಎಂದು ಮಿಲಿಟರಿ ನಿಯೋಜನೆಗೆ ಅನುಮತಿಸಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಬಾಂಗ್ಲಾದೇಶದಿಂದ ಅಕ್ರಮ ಒಳನುಸುಳುವಿಕೆಗೆ ಟಿಎಂಸಿ ಅನುಕೂಲ ಮಾಡಿಕೊಡುತ್ತಿದೆ ಎಂದು ಹೇಳಿದ ಶಾ, ‘ಮಮತಾ ಬ್ಯಾನರ್ಜಿ ಬಾಂಗ್ಲಾದೇಶಿಗಳಿಗೆ ಬಂಗಾಳದ ಗಡಿಗಳನ್ನು ತೆರೆದಿದ್ದಾರೆ. ಅವರು ಎಂದಿಗೂ ಒಳನುಸುಳುವಿಕೆಯನ್ನು ತಡೆಯಲು ಸಾಧ್ಯವಿಲ್ಲ. ಬಿಜೆಪಿ ಮಾತ್ರ ಅದನ್ನು ಮಾಡಬಹುದು’ ಎಂದು ಹೇಳಿದರು.

ಟಿಎಂಸಿ ಸರ್ಕಾರ ಬಿಎಸ್‌ಎಫ್‌ಗೆ ಅಗತ್ಯವಾದ ಭೂಮಿ ನೀಡಿದ ನಂತರ ನಾವು ಒಳನುಸುಳುವಿಕೆಯನ್ನು ನಿಲ್ಲಿಸುತ್ತೇವೆ. ಆದರೆ, ಬಂಗಾಳದ ಆಡಳಿತ ಪಕ್ಷವು ಬಿಎಸ್‌ಎಫ್‌ಗೆ ಎಂದಿಗೂ ಭೂಮಿ ನೀಡುವುದಿಲ್ಲ. ಏಕೆಂದರೆ ಅದು ಅಧಿಕಾರದಲ್ಲಿ ಉಳಿಯಲು ಒಳನುಸುಳುವಿಕೆ ಮುಂದುವರಿಯಲು ಬಯಸುತ್ತದೆ ಎಂದು ಶಾ ಹೇಳಿದರು.

ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತದ ಸೇನಾಪಡೆಗಳು ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಬ್ಯಾನರ್ಜಿ ಇತ್ತೀಚೆಗೆ ಟೀಕಿಸಿದ್ದರು.

ವಕ್ಫ್ ಕಾನೂನಿನ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಮುರ್ಷಿದಾಬಾದ್‌ನಲ್ಲಿ ನಡೆದ ಕೋಮು ಗಲಭೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!