ಹೊಸದಿಗಂತ ವರದಿ, ಶಿವಮೊಗ್ಗ:
ಗೃಹ ಸಚಿವ ಆರಗ ಜ್ನಾನೇಂದ್ರ ಅವರ ಪ್ರಾಮಾಣಿಕತೆಯನ್ನು ವಿರೋಧ ಪಕ್ಷಗಳು ಮೆಚ್ಚಬೇಕಾಗಿತ್ತು. ಅದನ್ನು ಬಿಟ್ಟು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ಷೇಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆ ಕ್ಷಣಕ್ಕೆ ಸಿಕ್ಕ ಮಾಹಿತಿಯನ್ನು ಆರಗ ಜ್ನಾನೇಂದ್ರ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಬಳಿಕ ಮಾಹಿತಿ ತಪ್ಪಾಗಿದೆ ಎಂದಾಕ್ಷಣ ಸರಿಯಾದ ಮಾಹಿತಿ ನೀಡಿದ್ದಾರೆ. ಜೊತೆಗೆ ಹಿಂದಿನ ಹೇಳಿಕೆ ತಪ್ಪಾಗಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಪ್ರಾಮಾಣಿಕವಾಗಿ ಇರೋದಕ್ಕೆ ರಾಜೀನಾಮೆ ಕೊಡಬೇಕಾ? ಎಂದು ಪ್ರಶ್ನಿಸಿದರು.
ವಿರೋಧ ಪಕ್ಷಗಳು ಕೊಲೆ ಹಿಂದಿರುವ ಗೂಂಡಾಗಳನ್ನು ಬಂಧಿಸಿ ಜೈಲಿಟಗಟ್ಟುವ ಬಗ್ಗೆ ಆಗ್ರಹ ಮಾಡಬೇಕಾಗಿತ್ತು. ಈ ತರಹ ಮಾಡಿದ್ದರೆ ವಿರೋಧ ಪಕ್ಷಗಳನ್ನು ಒಪ್ಪಿಕೊಳ್ಳಬಹುದಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗದಲ್ಲಿ ಪಿಎಫ್ಐ ಸಮಾವೇಶ ನಡೆಯಿತು. ಮೆರವಣಿಗೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರು. ಇದು ಆಗಿನ ಗೃಹ ಸಚಿವರ ವೈಫಲ್ಯ. ಹಾಗಿದ್ದರೂ ಅವರೇನು ರಾಜೀನಾಮೆ ಕೊಟ್ಟಿರಲಿಲ್ಲ. ಈಗ ಜ್ನಾನೇಂದ್ರ ಪ್ರಾಮಾಣಿಕವಾಗಿ ಇರಬೇಕಾದರೆ ರಾಜೀನಾಮೆ ಪ್ರಶ್ನೆಯೇ ಬರುವುದಿಲ್ಲ ಎಂದರು.