ಹೊಸದಿಗಂತ ವರದಿ ಮಂಗಳೂರು:
ಹೃದಯಾಘಾತದಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯ ಜೀವವನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆ ಉಳಿಸಿದೆ. ಅತ್ಯಂತ ಕಷ್ಟಕರವಾದ ಪ್ರಕ್ರಿಯೆಯೊಂದನ್ನು ನಡೆಸಿ ರೋಗಿಗೆ ಮರುಜೀವ ನೀಡಲಾಗಿದೆ.
ಆರ್ಬಿಟಲ್ ಅಥೆರೆಕ್ಟಮಿ ( ಕ್ಯಾಲ್ಸಿಫೈಡ್ ಪರಿಧಮನಿ ಕಾಯಿಲೆ ಚಿಕಿತ್ಸೆಗೆ ಬಳಸುವ ವಿಧಾನ) ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಆಸ್ಪತ್ರೆ ವೈದ್ಯರಾದ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥರು ಡಾ. ನರಸಿಂಹ ಪೈ, ಕಾರ್ಡಿಯೋಲಾಜಿ ವಿಭಾಗದ ಅಸೋಸಿಯೇಟ್ ಕನ್ಸಲ್ಟೆಂಟ್ ಡಾ. ದಿತೇಶ್ ಎಮ್ ಮತ್ತವರ ತಂಡ ಹೃದಯ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿ ಪುನಃ ಸಾಮಾನ್ಯ ಜೀವನ ನಡೆಸಲು ನೆರವಾಗಿದ್ದಾರೆ.
63 ವರ್ಷದ ಅತುಲ್ ( ಹೆಸರು ಬದಲಾಯಿಸಲಾಗಿದೆ) ಎಂಬ ವ್ಯಕ್ತಿ ಮಯೋಕಾರ್ಡಿಯಲ್ ಇನ್ಫಾರ್ಕ್ಶನ್ ಎಂಬ ಹೃದಯದ ಸಮಸ್ಯೆಯಿಂದ (ಹೃದಯ ಮುಂಭಾಗದ ಗೋಡೆಯ ಹಾನಿ) ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಸಮಸ್ಯೆಯನ್ನು ಪರಿಶೀಲಿಸಿ ಡಾ. ಪೈ ಅವರು ತುರ್ತು ಕೊರೊನರಿ ಆಂಜಿಯೋಗ್ರಾಫಿಗೆ ಸಲಹೆ ನೀಡಿದ್ದರು. ಈ ಪರೀಕ್ಷೆಯಲ್ಲಿ ಹೃದಯಕ್ಕೆ ರಕ್ತ ಪೂರೈಸುವ ನಾಳದಲ್ಲಿ ಶೇ. 100 ರಷ್ಟು ಬ್ಲಾಕೇಜ್ ಇರುವುದು ಪತ್ತೆಯಾಗಿತ್ತು. ಆರಂಭದಲ್ಲಿ ರಕ್ತ ಸಂಚಾರ ಪುನರ್ ಆರಂಭಿಸಲು ಬಾಲ್ಲೂನ್ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿತ್ತು. ಮುಂದುವರೆದ ಪರೀಕ್ಷೆಯಲ್ಲಿ ಸಮೀಪದ ಮಧ್ಯ ಎಲ್ಎಡಿ ಅಪಧಮನಿಯಲ್ಲಿ ತೀವ್ರವಾದ ಕ್ಯಾಲ್ಸಿಫೈಡ್ ಅಂಶವನ್ನು ಸೂಚಿಸಿದೆ. ಇದು ಸ್ಟಂಟ್ ಅಳವಡಿಕೆಗೂ ತಡೆಯಾಗಿತ್ತು. ಇಂತಹ ಸಂದರ್ಭದಲ್ಲಿ ಕಾರ್ಡಿಯೋಲಾಜಿ ತಂಡ ಆರ್ಬಿಟಲ್ ಅಥೆರೆಕ್ಟೊಮಿ ವಿಧಾನವೇ ಸೂಕ್ತ ಎಂದು ತೀರ್ಮಾನಿಸಿತು.
ಏನಿದು ಆರ್ಬಿಟಲ್ ಅಥೆರೆಕ್ಟೊಮಿ ವಿಧಾನ?
ಈ ಆಧುನಿಕ ಚಿಕಿತ್ಸಾ ವಿಧಾನದಲ್ಲಿ ಡೈಮಂಡ್ ಕೋಟೆಡ್ ಕ್ರೌನ್ ಎಂಬ ಸಣ್ಣ ಉಪಕರಣವನ್ನು ಕ್ಯಾಲ್ಶಿಯಮ್ ಬ್ಲಾಕೇಜ್ ಇರುವಲ್ಲಿ ಕಳಿಸಲಾಗುತ್ತದೆ. ನಯವಾಗಿ ಹಾಗೂ, ಅತಿ ವೇಗದಲ್ಲಿ ಸಾಗುವ ಈ ಉಪಕರಣ ಅಪಧಮನಿಯಲ್ಲಿ ಸಿಲುಕಿರುವ ಕ್ಲಾಲ್ಶಿಯಮ್ ಕಣಗಳನ್ನು ದೂರ ತಳ್ಳುತ್ತದೆ. ಈ ಮೂಲಕ ಸುರಕ್ಷಿತವಾದ ಹಾಗೂ ಪರಿಣಾಮಕಾರಿಯಾದ ಸ್ಟೆಂಟ್ ಅಳವಡಿಕೆಗೆ ನೆರವಾಗುತ್ತದೆ.
ಚಿಕಿತ್ಸೆ ಕುರಿತು ಮಾಹಿತಿ ನೀಡಿದ ಡಾ. ನರಸಿಂಹ ಪೈ ಆರ್ಬಿಟಲ್ ಅಥೆರೆಕ್ಟಮಿ ವಿಧಾನ ಅನುಸರಿಸಿರುವುದು ಕ್ಲಿಷ್ಟಕರ ಹೃದಯ ಸಂಬಂಧಿ ಸಮಸ್ಯೆಯನ್ನು ಗುಣಪಡಿಸುವ ನಮ್ಮ ಸಾಮರ್ಥ್ಯದ ಎತ್ತರವನ್ನು ಬಿಂಬಿಸುತ್ತದೆ. ಈ ಆಧುನಿಕ ವಿಧಾನ ಅನೇಕ ಕ್ಯಾಲ್ಶಿಯಮ್ ಬ್ಲಾಕೇಜ್ನಂತಹ ಸಮಸ್ಯೆಯನ್ನು ಯಶಸ್ವಿಯಾಗಿ ಗುಣಪಡಿಸಿ, ರೋಗಿಯ ಜೀವನದ ಗುಣಮಟ್ಟವನ್ನು ಎತ್ತರಿಸಲು ನೆರವಾಗಿದೆ ಎಂದಿದ್ದಾರೆ.
ಚಿಕಿತ್ಸೆ ಕುರಿತು ಮಾತನಾಡಿದ ಕೆಎಮ್ಸಿ ಆಸ್ಪತ್ರೆ, ಮಂಗಳೂರು ಪ್ರಾದೇಶಿಕ ಕಾರ್ಯನಿರ್ವಹಣಾ ಅಧಿಕಾರಿ ಸಾಘೀರ್ ಸಿದ್ದೀಕಿ ಕರಾವಳಿ ಭಾಗದಲ್ಲಿ ಆಧುನಿಕ ಚಿಕಿತ್ಸಾ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸುವ ನಮ್ಮ ಕ್ಷಮತೆಗೆ ಆರ್ಬಿಟಲ್ ಅಥೆರೆಕ್ಟಮಿ ವಿಧಾನದ ಸಫಲತೆ ಉದಾಹರಣೆಯಾಗಿದೆ. ನಮ್ಮ ಕಾರ್ಡಿಯಾಲಜಿ, ಕಾರ್ಡಿಯಾಕ್ ಸರ್ಜನ್, ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಾಜಿಸ್ಟ್ ತಂಡಕ್ಕೆ ಇದೊಂದು ಹೆಮ್ಮೆಯ ಕ್ಷಣವಾಗಿದೆ. ನಮ್ಮ ತಜ್ಞರ ಕಾರ್ಯಕ್ಷಮತೆ, ಬದ್ಧತೆ ನಮ್ಮ ಆಸ್ಪತ್ರೆಯನ್ನು ಹೃದಯ ಸಂಬಂಧಿ ಕಾಯಿಲೆ ಚಿಕಿತ್ಸೆಗೆ ಭರವಸೆಯ ಕೇಂದ್ರವನ್ನಾಗಿ ಮಾಡಿದೆ ಎಂದರು.