ಹೊಸದಿಗಂತ ವರದಿ,ಬೆಂಗಳೂರು:
ರಾಷ್ಟ್ರ- ರಾಜ್ಯ ತಾಯಿ ಮಗುವಿನ ಸಂಬಂಧದಂತೆ ಶ್ರೇಷ್ಠ ಚಿಂತನೆಗಳು ಅರಣ್ಯ-ಪ್ರಕೃತಿಯಲ್ಲಿ ಉಗಮವಾಗಿವೆಯೇ ಹೊರತು ವಿಶ್ವವಿದ್ಯಾಲಯದ ತರಗತಿಗಳಲ್ಲಿ ಅಲ್ಲ ಎಂದು ಉಪನ್ಯಾಸಕ ಡಾ. ಬಿ.ವಿ. ವಸಂತಕುಮಾರ ಹೇಳಿದರು.
ನಗರದ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ 3ನೇ ಯಂಗ್ ಥಿಂಕರ್ಸ್ ಮೀಟ್ ನ ಪ್ರಾದೇಶಿಕತೆ-ರಾಷ್ಟ್ರೀಯತೆ ಕುರಿತಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯತೆ ಪಾಶ್ಚಾತ್ಯರು ಹೇಳುವ ರಾಜಕೀಯ ದೃಷ್ಟಿಕೋನವಲ್ಲ. ಇದು ಮಾನವ ರೀತಿಯ ಸಂಬಂಧ ಬಿಂಬಿಸುತ್ತದೆ. ಕುವೆಂಪು ಹೇಳಿದಂತೆ ರಾಷ್ಟ್ರ ಹಾಗೂ ರಾಜ್ಯ ತಾಯಿ-ಮಗಳ ಸಂಬಂಧದ ರೀತಿಯಲ್ಲಿವೆ ಎಂದು ಹೇಳಿದರು.
ಲೇಖಕ ರೋಹಿತ ಚಕ್ರತೀರ್ಥ ಮಾತನಾಡಿ, ನಮ್ಮೆಲ್ಲ ಚಿಂತನೆ ಹಾಗೂ ನಂಬಿಕೆಗಳು ಭಾರತದುದ್ದಕ್ಕೂ ಒಂದೇ ಆಗಿದೆ. ಭಾರತದಷ್ಟು ಸಂಕೀರ್ಣ ವ್ಯವಸ್ಥೆ ವಿಶ್ವದ ಬೇರೆಲ್ಲೂ ಇಲ್ಲ. ರಾಜಕೀಯ ದುರುದ್ದೇಶದಿಂದ ರಾಷ್ಟ್ರ ಹಾಗೂ ರಾಜ್ಯದ ನಡುವೆ ವೈಷಮ್ಯವೂ ಬಿತ್ತಲಾಗುತ್ತಿದೆ. ಅನೇಕ ವೈಚಾರಿಕ ವಿರೋಧಿಗಳು ಸಕ್ರಿಯರಾಗಿದ್ದಾರೆ. ಹಾಗಾಗಿ ನಾವು ಅಧ್ಯಯನಶೀಲರಾಗುವ ಮೂಲಕ ವೈಚಾರಿಕವಾಗಿ ಬಲಗೊಳ್ಳಬೇಕು ಎಂದು ಹೇಳಿದರು.
ಇದಕ್ಕೂ ಪೂರ್ವದ ಗೋಷ್ಠಿಗಳಲ್ಲಿ ಮಾಜಿ ಶಾಸಕ ಅರುಣ ಶಹಾಪುರ ನೂತನ ಶಿಕ್ಷಣ ನೀತಿಯ ಮಹತ್ವ, ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ಸಂಶೋಧನೆಯ ಹೊಸ ಆಯಾಮ, ಶಿಕ್ಷಣ ಕ್ಷೇತ್ರದ ನ್ಯೂನತೆ ಹಾಗೂ ಪ್ರಾಧ್ಯಾಪಕಿ ಆರತಿ ಪಟ್ರಮೆ ಭಾಷಾ ಶಿಕ್ಷಣ ಕುರಿತು ವಿಚಾರ ವ್ಯಕ್ತಪಡಿಸಿದರು.
ಸಾಮಾಜಿಕ ಮಾಧ್ಯಮ ಹಾಗೂ ರಾಷ್ಟ್ರೀಯತೆ ಗೋಷ್ಠಿಯಲ್ಲಿ ಪತ್ರಕರ್ತ ಹರಿಪ್ರಕಾಶ ಕೊಣೆಮನೆ ಮಾತನಾಡಿ, ಮಾಧ್ಯಮದ ಕಾರ್ಯಶೈಲಿ ಹಾಗೂ ಪ್ರಸ್ತುತ ಸ್ಥಿತಿಗತಿ ಕುರಿತು ವಿವರಿಸಿದರು. ವಿಕ್ರಮ ಪತ್ರಿಕೆ ಸಂಪಾದಕ ರಮೇಶ ದೊಡ್ಡಪುರ ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಕುರಿತು ಬೆಳಕು ಚೆಲ್ಲಿದರು.
ಅರವಿಂದ ರೊಂಗಾಲಾ, ರಶ್ಮೀ ಸಾಮಂತ ಹಾಗೂ ಸುರಭಿ ಹೊದಿಗೆರೆ ನವಯುಗ ಚಳುವಳಿ ಹಾಗೂ ವೋಕಿಸಂ ಕುರಿತಾದ ಗೋಷ್ಠಿಯಲ್ಲಿ ಮಾತನಾಡಿದರು. ರಾಜೇಶ ಪದ್ಮಾರ, ತನ್ಮಯಿ ಪ್ರೇಮಕುಮಾರ, ಕಿರಣಕುಮಾರ ಇತರರು ಪಾಲ್ಗೊಂಡಿದ್ದರು.