ಹೊಸದಿಗಂತ ದಾವಣಗೆರೆ:
ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲನೆ ಮಾಡುತ್ತಿದ್ದ ಸವಾರನ ಎಡಗಾಲು ತುಂಡಾಗಿ, ದೇಹದಿಂದಲೇ ಬೇರ್ಪಟ್ಟ ಘಟನೆ ತಾಲೂಕಿನ ಆನಗೋಡು ಬಳಿ ಶುಕ್ರವಾರ ಸಂಭವಿಸಿದೆ.
ತಾಲೂಕಿನ ಕೋಲ್ಕುಂಟೆ ಗ್ರಾಮದ ಬಸವರಾಜ ಬೈಕ್ ಅಪಘಾತದಲ್ಲಿ ತನ್ನ ಎಡಗಾಲನ್ನು ಕಳೆದುಕೊಂಡ ದುರ್ದೈವಿ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನಗೋಡು ಬಳಿ ಬೈಕ್ ನಲ್ಲಿ ಬರುತ್ತಿದ್ದ ಬಸವರಾಜ ನಿಯಂತ್ರಣ ತಪ್ಪಿದ ಬೈಕ್ ಹೆದ್ದಾರಿ ಪಕ್ಕದ ಕಬ್ಬಿಣದ ಡಿವೈಡರ್ ಗಳಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಬಸವರಾಜನ ಕಾಲು ಕಬ್ಬಿಣದ ಕೆಳಗೆ ಸಿಲುಕಿದ್ದು, ದೇಹವು ಚಾಲನೆಯಲ್ಲಿದ್ದ ಬೈಕ್ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಎಡಗಾಲು ದೇಹದಿಂದ ಬೇರ್ಪಟ್ಟಿದೆ. ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ಸ್ಥಳೀಯರು, ಗ್ರಾಮಸ್ಥರು, ದಾರಿಹೋಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.