ಹೊಸದಿಗಂತ ವರದಿ ಕಲಬುರಗಿ:
ಪಿ.ಎಸ್.ಐ.ಪರೀಕ್ಷೆ ನೇಮಕಾತಿ ಅಕ್ರಮದ ಪ್ರಮುಖ ಆರೋಪಿಯಾದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಶನಿವಾರ ತಡರಾತ್ರಿ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಕಲಬುರಗಿ ಹೈಕೋರ್ಟ್ ಮೂರು ದಿನಗಳ ಹಿಂದೆ ಕಿಂಗ್ ಪಿನ್ ಸಹೋದರುಗಳಾದ ಆರ್.ಡಿ.ಪಾಟೀಲ್ ಮತ್ತು ಮಹಾಂತೇಶ ಪಾಟೀಲ್ ಗೆ ಜಾಮೀನು ನೀಡಿತ್ತು. ಅದರಂತೆ ಮಹಾಂತೇಶ ಎರಡು ದಿನಗಳ ಹಿಂದೆ ಹೊರ ಬಂದಿದ್ದರು.
ಆರ್.ಡಿ.ಪಾಟೀಲ್ ವಿರುದ್ಧ ಒಂಭತ್ತು ಕೇಸ್ ಇರುವುದರಿಂದ ಅವುಗಳಲ್ಲಿ ಕೆಳ ನ್ಯಾಯಾಲಯದಲ್ಲಿ ಗುವಿವಿ ಠಾಣೆ ಮತ್ತು ಸೆನ್ ಪೋಲಿಸ್ ಠಾಣೆಯಲ್ಲಿನ ಕೇಸ್ಗೆ ಸಂಬಂಧಿಸಿದಂತೆ ವಾರೆಂಟ್ ಇದ್ದವು. ಈ ಕಾರಣಕ್ಕೆ ಆರ್.ಡಿ.ಪಾಟೀಲ್, ಗೆ ಬಿಡುಗಡೆ ಆಗಿರಲಿಲ್ಲ.
ಹೈಕೋರ್ಟ್ ಜಾಮೀನು ನೀಡಿದ ಆದೇಶ ಪ್ರತಿಯೊಂದಿಗೆ ಅವರ ಪರ ವಕೀಲರಾದ ಅಶೋಕ ಮೂಲಗೆ ಅವರು ವಾರೆಂಟ್ ರಿ ಕಾಲ್ ಮಾಡಲು ಜೆ.ಎಂ.ಎಫ್. ಸಿ. ನ್ಯಾಯಾಲಯ ಮುಂದೆ ಕೋರಿಕೊಂಡು, ಆ ಪ್ರಕ್ರಿಯೆ ಮುಗಿಸಿದರು. ಬಳಿಕ ಶ್ಯೂರಿಟಿ ನೀಡುವುದು, ಇತ್ಯಾದಿ ಕಾರ್ಯ ಮುಗಿದ ನಂತರ ನಿನ್ನೆ ಶನಿವಾರ ತಡರಾತ್ರಿ ಜೈಲಿನಿಂದ ಆರ್.ಡಿ. ಪಾಟೀಲ್ ಹೊರ ಬಂದಿದ್ದಾರೆ.
ಮಹಾಂತೇಶ ಪಾಟೀಲ್ ಬಿಡುಗಡೆಯಾದ ಹೊತ್ತಿನಲ್ಲಿ ಸಂಭ್ರಮಿಸಿದ್ದು, ವಿವಾದ ಆಗಿತ್ತು. ಇದು ಹಾಗೆ ಆಗಬಾರದು ಎಂಬ ಕಾರಣಕ್ಕೆ ಯಾರಿಗೂ ಮಾಹಿತಿ ನೀಡದೆ ಜೈಲಿನಿಂದ ನೇರವಾಗಿ ತಮ್ಮ ಆಪ್ತರೊಂದಿಗೆ ಮನೆಗೆ ತೆರಳಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಆರ್.ಡಿ.ಪಾಟೀಲ್ ಸಾಮಾಜಿಕ ಜಾಲತಾಣಗಳಲ್ಲಿ ವಿನಂತಿ ಮಾಡಿಕೊಂಡು, ತನ್ನನ್ನ ಭೇಟಿಯಾಗಲು ಮನೆ, ಕಚೇರಿಗೆ ಯಾರು ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನನ್ನ ಅಭಿಮಾನಿಗಳು, ಹಿತೈಷಿಗಳು ನನ್ನನ್ನು ಕಾಣಲು ಕಾತುರದಿಂದ ಕಾಯುತ್ತಿದ್ದಿರಿ. ನನ್ನನ್ನು ವಿಜೃಂಭಣೆಯಿಂದ ಸ್ವಾಗತಿಸಲು ಖರ್ಚು ವೆಚ್ಚ ಮಾಡಿಕೊಂಡಿದ್ದಿರಿ. ಆದರೆ, ವ್ಯೆಯಕ್ತಿಕ ಕೆಲಸದಿಂದ ಕಲಬುರಗಿಯಿಂದ ಹೊರಗಡೆ ಹೋಗಿದ್ದೇನೆ. ಒಂದು ವಾರದಲ್ಲಿ ಅಫಜಲಪುರಕ್ಕೆ ಬಂದು ನಿಮ್ಮ ಸೇವೆಯಲ್ಲಿ ತೋಡಗಿಕೊಳ್ಳುವುದಾಗಿ ಸಂದೇಶ ನೀಡಿದ್ದಾರೆ.