ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಪ್ಟೆಂಬರ್ 7ಕ್ಕೆ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಒಂದು ವರ್ಷ ಪೂರ್ಣಗೊಳಲ್ಲಿದ್ದು, ಈ ಹಿನ್ನೆಲೆ ಯಾತ್ರೆ ನೆನಪಿನಲ್ಲಿ ಪಾದಯಾತ್ರೆ ಮಾಡಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಮನಗರ ಜಿಲ್ಲೆ ಆಯ್ಕೆ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 7ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಸಂಪುಟ ಸಭೆ ಬಳಿಕ ಸಚಿವರಿಂದ ಆಯಾ ಜಿಲ್ಲೆಗಳಲ್ಲಿ ಸಂಜೆ 5 ಗಂಟೆಗೆ ಪಾದಯಾತ್ರೆ ನಡೆಯಲಿದೆ. ಜನರಿಗೆ ಸಮಸ್ಯೆ ಆಗಬಾರದೆಂದು ಬೆಂಗಳೂರಿನಲ್ಲಿ ಪಾದಯಾತ್ರೆ ಇಲ್ಲ. ಉಳಿದಂತೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಯುತ್ತೆ. ಒಂದು ಗಂಟೆಗಳ ಕಾಲ ಪಾದಯಾತ್ರೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ರೈತರ ವಿರೋಧ ವಿಚಾರವಾಗಿ ಮಾತನಾಡಿದ ಅವರು, ವಿವಿಧ ಸಂಘಟನೆಗಳು ಹೋರಾಟ ಮಾಡುತ್ತಿರುವುದಕ್ಕೆ ಧನ್ಯವಾದ. ಆದರೆ ಮೇಕೆದಾಟು ಪಾದಯಾತ್ರೆ ವೇಳೆ ಈ ಸಂಘಟನೆಗಳು ಎಲ್ಲಿದ್ದವು? ಆಗ ಯಾಕೆ ಯೋಜನೆಗೆ ಅನುಮತಿ ನೀಡಿ ಅಂತಾ ಕೇಂದ್ರಕ್ಕೆ ಕೇಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಕೂಡ ಕೇಂದ್ರದ ಬಳಿ ಯೋಜನೆಗೆ ಅನುಮತಿ ಕೇಳುತ್ತಿಲ್ಲ. ಕೇಂದ್ರಕ್ಕೆ ಅನುಮತಿ ಕೊಡಿ ಅಂತ ಹೋರಾಟಗಾರರು ಕೇಳಲಿ. ನಮ್ಮ ಸರ್ಕಾರ ರೈತರ ಹಿತ ಕಾಪಾಡಲು ಬದ್ಧವಾಗಿದೆ. ತಮಿಳುನಾಡು 20 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರಿಗೆ ಆಗ್ರಹಿಸಿತ್ತು. ‘ಸುಪ್ರೀಂ’ ಆದೇಶದ ಮೇರೆಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಿದ್ದೇವೆ. ಸುಪ್ರೀಂಕೋರ್ಟ್ನಲ್ಲಿ ನಮ್ಮ ವಕೀಲರು ಉತ್ತಮ ವಾದ ಮಂಡಿಸಿದ್ದಾರೆ. ನಾನು ಕೂಡ ನವದೆಹಲಿಗೆ ಹೋಗಿ ವಕೀಲರ ಜೊತೆ ಮಾತನಾಡಿದ್ದೇನೆ. ರಾಜ್ಯದ ವಸ್ತುಸ್ಥಿತಿ ಅಧ್ಯಯನ ನಡೆಸುವಂತೆ CWMAಗೆ ಮನವಿ ಮಾಡಿದ್ದೇವೆ. ಸುಪ್ರೀಂಕೋರ್ಟ್ಗೂ ಮೇಲ್ಮನವಿ ಸಲ್ಲಿಸಿ ವಸ್ತುಸ್ಥಿತಿ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.