ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪಾಕಿಸ್ತಾನದಲ್ಲಿ ಪ್ರಸಕ್ತ ಪ್ರಧಾನಿ ಇಮ್ರಾನ್ ಖಾನ್ ರನ್ನು ಇಳಿಸುವುದಕ್ಕೆ ಆಗುತ್ತಿರುವ ಪ್ರಯತ್ನಗಳನ್ನು ಓದಿಯೇ ಇರುತ್ತೀರಿ. ಇದರ ಮುಂದುವರಿದ ಭಾಗವಾಗಿ ಪಾಕಿಸ್ತಾನದಲ್ಲಿ ಅರಾಜಕತೆ ಹೆಚ್ಚಲಿದೆಯಾ? ಇಮ್ರಾನ್ ಹೋಗಿ ಮತ್ಯಾರೇ ಬಂದರೂ, ಮಿಲಿಟರಿಯೇ ಆಡಳಿತ ಹಿಡಿದರೂ ಜನರೇ ದಂಗೆ ಏಳುವ ಅಪಾಯವೊಂದನ್ನು ಪಾಕಿಸ್ತಾನ ಎದುರುನೋಡುತ್ತಿದೆ. ಏಕೆಂದರೆ, ದೇಶದ ಆಹಾರ ಭದ್ರತೆಗೇ ಈಗ ಸವಾಲು ಎದುರಾಗಿದೆ.
ರಷ್ಯ ಮತ್ತು ಉಕ್ರೇನ್ ಗಳ ಸಂಘರ್ಷ ಹೆಚ್ಚು ದಿನಗಳಿಗೆ ವಿಸ್ತರಿಸುತ್ತ ಹೋದಂತೆ ಅದು ಇಡೀ ಆಹಾರ ಪೂರೈಕೆ ಸರಪಳಿ ಮೇಲೆ ದುಷ್ಪರಿಣಾಮ ಉಂಟುಮಾಡಲಿದೆ. ರಷ್ಯ ಮತ್ತು ಉಕ್ರೇನ್ ಒಂದಾಗಿ ಜಗತ್ತಿನ ಬಹುಪಾಲು ಗೋದಿ ಬೇಡಿಕೆಯನ್ನು ಪೂರೈಸುತ್ತವೆ. ಪಾಕಿಸ್ತಾನದ ಗೋದಿ ಬೇಡಿಕೆ ಪೂರೈಕೆಗೂ ರಷ್ಯ ಅತ್ಯವಶ್ಯ.
ಅಂತಾರಾಷ್ಟ್ರೀಯ ನಿರ್ಬಂಧಗಳ ಹೊರತಾಗಿಯೂ ರಷ್ಯದಿಂದ 2 ಮಿಲಿಯನ್ ಮೆಟ್ರಿಕ್ ಟನ್ ಗೋದಿ ಆಮದಾಗಿಸಿಕೊಳ್ಳುವುದಾಗಿ ಪಾಕಿಸ್ತಾನ ಘೋಷಿಸಿದೆ. ಆದರೆ, ಇದು ಎಷ್ಟು ದಿನ ಮುಂದುವರಿದೀತು ಎಂಬುದು ಯಕ್ಷಪ್ರಶ್ನೆಯೇ. ರಷ್ಯವು ಪಾಕಿಸ್ತಾನಕ್ಕೆ ಎಲ್ಲ ಅಡೆತಡೆಗಳ ನಡುವೆ ಗೋದಿಯನ್ನು ಪೂರೈಸಿದರೂ ಅದಕ್ಕೆ ಪಾಕಿಸ್ತಾನ ಹೆಚ್ಚಿನ ಬೆಲೆ ತೆರಬೇಕಾಗುವುದಂತೂ ನಿಶ್ಚಿತ.
ಇಷ್ಟಕ್ಕೂ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗುತ್ತಿರುವುದೇ ಆತ ಹಣದುಬ್ಬರ ನಿಯಂತ್ರಿಸದೇ ಸಾಮಾನ್ಯರ ಬದುಕು ದುಬಾರಿಯಾಗಿದೆ ಎಂಬ ಕಾರಣಕ್ಕಾಗಿ. ಇದೀಗ, ಮುಖ್ಯ ಆಹಾರ ವಸ್ತುವಾದ ಗೋದಿಯ ಪೂರೈಕೆ ಮತ್ತು ಬೆಲೆ ಏರುತ್ತಲೇ ಹೋಗುವ ಸೂಚನೆ ಇರುವುದು ಪಾಕಿಸ್ತಾನದ ಭವಿಷ್ಯವನ್ನು ಭೀಕರವಾಗಿಸಿದೆ.
ಇತ್ತ, ಭಾರತ ಗೋದಿಯನ್ನು ಸಮೃದ್ಧವಾಗಿ ಬೆಳೆಯುತ್ತಿದೆಯಲ್ಲದೇ, ಸಂಘರ್ಷದ ಉಪಯೋಗ ಪಡೆದು ಬೇರೆ ರಾಷ್ಟ್ರಗಳಿಗೆ ರಫ್ತು ಹೆಚ್ಚಿಸುವ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಭಾರತದೆದುರು ಕೈಚಾಚುವುದಕ್ಕೆ ಅವಕಾಶವಿಲ್ಲದಂತೆ ಪಾಕಿಸ್ತಾನ ಕ್ಷೋಭೆಯ ಹಾದಿಯಲ್ಲಿದೆ.
ಫೆಬ್ರುವರಿ ಮಧ್ಯಭಾಗದಲ್ಲಿ ಕೆಜಿಗೆ 63 ರುಪಾಯಿ ಮುಟ್ಟಿದ್ದ ಗೋದಿ, ಅಲ್ಲಿನ ಸಾಮಾನ್ಯರ ತಾಟುಗಳನ್ನು ಮುಟ್ಟುವುದು ಕಷ್ಟವಾಗಿದೆ.