ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನಲ್ಲಿ ಇತ್ತೀಚೆಗೆ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿ ಬಳಿಕ ಕೇಂದ್ರ ಸರ್ಕಾರವು ಪಾಕಿಸ್ತಾನದ ವಿರುದ್ಧ ಕೆಲವು ಕಠಿಣ ನಿಯಮ ರೂಪಿಸಿದೆ.
ಭಾರತದಲ್ಲಿ ವಾಸ್ತವ್ಯವಿದ್ದ ಪಾಕ್ ಪ್ರಜೆಗಳ ಬಗ್ಗೆ ರಾಜತಾಂತ್ರಿಕ ದಿಟ್ಟ ಹೆಜ್ಜೆಗಳನ್ನು ಸಹ ತೆಗೆದುಕೊಂಡಿದೆ. ಅದೇ ರೀತಿ ಭಾರತದಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಕಲಾವಿದರನ್ನು ಸಂಪೂರ್ಣವಾಗಿ ನಿಷೇಧ ಮಾಡುವಂತೆ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್ ನ ಪ್ರಧಾನ ಕಾರ್ಯದರ್ಶಿ ಅಶೋಕ್ ದುಬೆ ಸಹ ದೃಢ ನಿರ್ಧಾರ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೆ ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಕೆಲಸ ಮಾಡಲು ಅವಕಾಶ ನೀಡಬಾರದು ಎಂದು ಗೀತೆ ರಚನೆಕಾರ ಜಾವೇದ್ ಅಖ್ತರ್ ಆಕ್ರೋಶ ಹೊರಹಾಕಿದ್ದಾರೆ.
ಜಾವೇದ್ ಅಖ್ತರ್ ಪಹಲ್ಗಾಮ್ ದಾಳಿ ಬಳಿಕ ಬಹಿರಂಗವಾಗಿ ಪಾಕಿಸ್ತಾನದ ವಿರುದ್ಧ ಆಕ್ರೋಶಿತ ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಕೆಲಸ ಮಾಡಲು ಅವಕಾಶ ನೀಡದಿರುವುದೇ ಉತ್ತಮ. ಭಾರತೀಯ ಶ್ರೇಷ್ಠತೆ ಹೊಂದಿದ್ದ ಸಿನಿಮಾಗಳು ಪಾಕಿಸ್ತಾನದಲ್ಲಿ ಪ್ರದರ್ಶನ ನೀಡಲು ಅವಕಾಶವಿಲ್ಲ. ನಾವು ಪಾಕಿಸ್ತಾನ ಕಲಾವಿದರಿಗೆ ಅವಕಾಶ ನೀಡಬಾರದು ಎಂದಿದ್ದಾರೆ.
ಕವಿ ಫೈಜ್ ಅಹ್ಮದ್ ಫೈಜ್ ಪಾಕಿಸ್ತಾನದ ಮೂಲದವರಾದರೂ ಎ.ಬಿ. ವಾಜಪೇಯಿ ಆಳ್ವಿಕೆಯಲ್ಲಿ ಭಾರತಕ್ಕೆ ಬಂದಾಗ, ಅವರನ್ನು ರಾಜ್ಯ ಮುಖ್ಯಸ್ಥರಂತೆ ನಡೆಸಿಕೊಳ್ಳಲಾಯಿತು. ಈಗಾಗಲೇ ಪಾಕಿಸ್ತಾನದ ಕಲಾವಿದರಾದ ನುಸ್ರತ್ ಫತೇಹ್ ಅಲಿ ಖಾನ್, ಗುಲಾಮ್ ಅಲಿ ಮತ್ತು ನೂರ್ ಜಹಾನ್ ಮೊದಲಾದವರನ್ನು ಭಾರತ ಸ್ವಾಗತಿಸಿದೆ. ಆದರೆ ಇದೇ ರೀತಿ ಸ್ವಾಗತ ಪಾಕಿಸ್ತಾನದಿಂದ ಭಾರತದ ಕಲಾವಿದರಿಗೆ ದೊರೆತಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಭಾರತದ ಹೆಮ್ಮೆಯ ಗಾಯಕಿ ಲತಾ ಮಂಗೇಶ್ಕರ್ ಅವರು ಪಾಕಿಸ್ತಾನದಲ್ಲಿ ಅತ್ಯಂತ ಜನಪ್ರಿಯರಾಗಿದ್ದು ಅಲ್ಲಿ ಸಂಗೀತ ಪ್ರದರ್ಶನ ನೀಡಲು ಪಾಕಿಸ್ತಾನ ಇದುವರೆಗೆ ಅವಕಾಶ ಕೊಟ್ಟಿಲ್ಲ ಎಂದು ಅಖ್ತರ್ ಟೀಕಿಸಿದ್ದಾರೆ.