ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಜೆ.ಸಿ. ನಗರದ ಅಕ್ಕನ ಬಳಗದಲ್ಲಿ ಕಾಯಕ ಸಮಾಜದ ವತಿಯಿಂದ ಪಂಚಮ ಸಾಲಿ ಸಮಾಜಕ್ಕೆ ಮೀಸಲಾತಿ ವಿರೋಧಿಸಿ ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆಗೆ ಪಂಚಮ ಸಾಲಿ ಸಮಾಜದ ಮುಖಂಡರು ನುಗ್ಗಿ ದಾಂಧಲೆ ನಡೆಸಿದ ಘಟನೆ ಶನಿವಾರ ನಡೆದಿದೆ.
ಸಭೆ ಆರಂಭಕ್ಕೂ ಮುನ್ನ ಪಂಚಮ ಸಾಲಿ ಸಮುದಾಯದ ಮುಖಂಡರು ಸಭಾಂಗಣಕ್ಕೆ ಏಕಾಏಕಿ ಪ್ರವೇಶಿಸಿ ವೇದಿಕೆ ಮೇಲಿನ ಕುರ್ಚಿ, ಟೇಬಲ್ ಕಿತ್ತೊಗೆದು, ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕಾಯಕ ಸಮಾಜದ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ವಿರುದ್ಧ ಘೋಷಣೆ ಕೂಗಿದರು. ನಂತರ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಜೆ.ಸಿ. ನಗರದ ನಾಲ್ಕು ದಿಕ್ಕೂಗಳಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಸಭೆ ನಡೆಸಲಾಯಿತು. ಪಂಚಮ ಸಾಲಿ ಸಮಾಜದ ಮುಖಂಡರು ಜಿ.ಸಿ. ನಗರದ ರಸ್ತೆ ತಡೆದು ಕೆ.ಸಿ. ಪುಟ್ಟಸಿದ್ದಶೆಟ್ಟಿ ವಿರುದ್ಧ ಪ್ರತಿಭಟನೆ ನಡೆಸಿ ಅವರ ಪೋಸ್ಟರ್ ಸುಟ್ಟು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಒಂದು ಗಂಟೆಗೂ ಹೆಚ್ಚುಕಾಲ ಉದ್ವಿಗ್ನ ವಾತವರಣ ನಿರ್ಮಾಣವಾಗಿತ್ತು.