ಹೊಸದಿಗಂತ ವರದಿ ಕಲಬುರಗಿ:
ರಾಜ್ಯದ ರೈತರು ಸಂಕಷ್ಟಕ್ಕೆ ಈಡಾಗಿದ್ದು, ಜೆಡಿಎಸ್ನ ಪಂಚರತ್ನ ಯೋಜನೆಗಳು ಇಡೀ ರಾಜ್ಯದ ದಿಕ್ಕನ್ನೆ ಬದಲಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಪಂಚರತ್ನ ಯಾತ್ರೆ ಚಾಲನೆ ನೀಡಿ, ಬಸ್ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಡಿಕೆ ಕೆಲವರ ಕಪಿಮುಷ್ಠಿಯಲ್ಲಿ ಖಜೂರಿ ರಾಜಕಾರಣ ಇದೆ. ಅದರಿಂದ ಖಜೂರಿ ಗ್ರಾಮವನ್ನು ಮುಕ್ತಗೊಳಿಸಬೇಕು. ಆಳಂದ ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗಬಾರದು ಎಂದರು.
ರಾಜ್ಯದ ರೈತರನ್ನು ಕಷ್ಟಕ್ಕೆ ದೂಡಲು ನಮ್ಮ ಪಕ್ಷ ಬಿಡುವುದಿಲ್ಲ. ಪಂಚರತ್ನ ಯೋಜನೆಗಳು ಇಡೀ ರಾಜ್ಯ ಹಾಗೂ ರೈತರ ದಿಕ್ಕು ಬದಲಾವಣೆ ಮಾಡಲು ಜಾರಿ ಮಾಡಲಾಗಿದೆ ಎಂದರು. ನನ್ನ ಅಧಿಕಾರಾವಧಿಯಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಆದರೆ ಬಿಜೆಪಿ ಸರ್ಕಾರ ಸುಮಾರು 7 ಸಾವಿರ ಕೋಟಿ ಹಣವನ್ನು ಬೇರೆಡೆ ಡೈವಟ್೯ ಮಾಡಿದೆ ಎಂದು ಆರೋಪಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಇನ್ನೂ ಸಾವಿರಾರು ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದರು.