ಹೊಸದಿಗಂತ ವರದಿ ತುಮಕೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಸಾಕು ಎಂದರೆ, ರಾಜ್ಯದಲ್ಲಿ ಡಾ.ಜಿ.ಪರಮೇಶ್ವರ ಮುಖ್ಯಮಂತ್ರಿ ಅಗುತ್ತಾರೆ. ಇವರಿಗೆ ನನ್ನ ಬೆಂಬಲವಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ಕೊಟ್ಟಿದ್ದಾರೆ.
ನಗರದಲ್ಲಿ ಪೊಲೀಸ್ ವಸತಿ ಗೃಹ ಉದ್ಘಾಟನಾ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಜತೆ ವೇದಿಕೆ ಹಂಚಿಕೊಂಡು ಮಾತನಾಡಿದ ಅವರು, ಸಿದ್ದರಾಮಯ್ಯ ನಂತರ ಪರಮೇಶ್ವರ ಸಿಎಂ ಅಗಬೇಕು, ಇದಕ್ಕಾಗಿ ನಾವೆಲ್ಲಾ ಅವರ ಬೆಂಬಲಕ್ಕಿರುತ್ತೇವೆ ಎಂದರು.
ರಾಜಕೀಯದಲ್ಲಿ ಮುಂದೆ ಏನು ಬೇಕಾದರೂ ಆಗಬಹುದು, ಭವಿಷ್ಯದಲ್ಲಿ ಪರಮೇಶ್ವರ್ ಅವರಿಗೆ ಅದೃಷ್ಟವಿದೆ, ನಮ್ಮ ಜಿಲ್ಲೆಯಿಂದ ಒಬ್ಬರು ಸಿಎಂ ಆದರೆ ನಾವು ಅವರ ಪರವಾಗಿರುತ್ತೇವೆ. ಸಿದ್ದರಾಮಯ್ಯ ಬೇಡ ಎನ್ನುವವರೆಗೂ ನಾವು ಅವರ ಪರವಾಗಿರುತ್ತೇವೆ, ನಂತರ ಪರಮೇಶ್ವರ ಪರವಾಗಿರೋಣ ಎಂದರು. ಸಿಎಂ ಬದಲಾವಣೆ ಬಗ್ಗೆ ಮಾತನಾಡಿ ರಾಜಣ್ಣ ನೀಡಿರುವ ಹೇಳಿಕೆ ಇದೀಗ ಮತ್ತಷ್ಟು ಕುತೂಹಲ ಹುಟ್ಟು ಹಾಕಿದೆ.