ಹೊಸದಿಗಂತ ವರದಿ,ಕಲಬುರಗಿ:
ಅಧರ್ಮದ ಮೇಲೆ ಧರ್ಮದ ಜಯ,ಅಸತ್ಯದ ಮೇಲೆ ಸತ್ಯದ ಜಯ ಹಾಗೂ ಅಜ್ಞಾನದ ಮೇಲೆ ಜ್ಞಾನದ ಜಯ ಯಾವತ್ತಿಗೂ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಬೀದರ್ ಜಿಲ್ಲೆಯ ವಿಧ್ಯಾಭಾರತೀಯ ಕಾಯದರ್ಶಿಯಾದ ಭಗುಸಿಂಗ್ ಜಾಧವ್ ಹೇಳಿದರು.
ಅವರು ಭಾನುವಾರ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿಜಯದಶಮಿಯ ಉತ್ಸವ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ನಗರದ ವತಿಯಿಂದ ಆಕರ್ಷಕ ಪಥಸಂಚಲನ ನಡೆಸಿ, ನಂತರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೂ ಸಮಾಜಕ್ಕೆ ಶಾಸ್ತ್ರದ ಅಧ್ಯಯನದ ಜೊತೆಗೆ ಶಸ್ತ್ರದ ಬಗ್ಗೆಯೂ ಅರಿವಿದೆ.ಇಂದಿಗೂ ಸಮಾಜದ ಮೂಲೆ ಮೂಲೆಗಳಲ್ಲಿ ಅಧರ್ಮ,ಅಸತ್ಯ,ಅಜ್ಞಾನ ತಾಂಡವಾಡುತ್ತಿವೆ. ಹೀಗಾಗಿ ಅವುಗಳ ವಿರುದ್ಧ ಹಿಂದೂ ಸಮಾಜ ತೊಡೆ ತಟ್ಟಿ ನಿಲ್ಲಬೇಕಾಗಿದೆ ಎಂದರು.
ಸಂಘದ ಶಕ್ತಿಯ ಅರಿವು ಇಡೀ ವಿಶ್ವಕ್ಕೆ ಪರಿಚಯವಾಗಿದೆ.ವಿಶ್ವದ ವಿವಿಧ ಸ್ಥರಗಳಲ್ಲಿ ಸಂಘದ ಸ್ವಯಂಸೇವಕರು ಕಾರ್ಯ ನಿರ್ವಹಿಸುತ್ತಿದ್ದು, ಹಿಂದೂ ಧರ್ಮದ ಉಳಿವಿಗಾಗಿ ವಿಶ್ವದಾದ್ಯಂತ ಜಾಗೃತಿ ಅಭಿಯಾನ, ಧರ್ಮ ರಕ್ಷಣೆಯ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ ಎಂದರು.ದೇಶದ ಕೆಲವು ವಿರೋಧಿಗಳು ರಾಮಮಂದಿರ ಕುಟ್ಟುವ ಕುರಿತಾಗಿ ಅಪಹಾಸ್ಯ ಮಾಡುತ್ತಿದ್ದರು, ಆದರೆ, ಇಂದೂ ಅವರಿಗೆ ಮಂದಿರ ಕಟ್ಟಡ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಿದರು.
೨೦೧೪ ರಿಂದ ಇಲ್ಲಿಯವರೆಗೆ ಭಾರತ ದೇಶದ ಚಿತ್ರಣವೇ ಬದಲಾಗಿ ಹೋಗಿದೆ.ಇಡೀ ವಿಶ್ವ ಭಾರತದ ಕಡೆಗೆ ತಿರುಗಿ ನೋಡುವ ಹಾಗೇ ಈ ದೇಶದ ಪ್ರಧಾನಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ.ಚಂದ್ರಯಾನ ೩ ಯಶಸ್ವಿ ನಂತರ ಭಾರತ ದೇಶ ಇತಿಹಾಸದ ಪುಟಗಳಲ್ಲಿ ತನ್ನ ಮೊಹರನ್ನು ಒತ್ತಿ ಬಿಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮನೀಶ್ ವೈಕುಂಠ ಅವರು ಮಾತನಾಡಿ,ಸಂಘದ ನಿಸ್ವಾರ್ಥ ಸೇವೆ ಎಂದಿಗೂ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ನಗರದ ವ್ಯವಸ್ಥಾ ಪ್ರಮುಖ್ ಶರಣರಾಜ್ ಖೇಳೆಗಾಂವಕರ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ವಿಭಾಗ ಪ್ರಚಾರಕರಾದ ವಿಜಯ್ ಮಹಾಂತೇಶ, ಕಿರಣ್ ಸುವರ್ಣಕಾರ್ ಸುರೇಶ್ ಹೆರೂರ, ಚಿದಾನಂದ ಹಿರೇಮಠ, ಶ್ರೀಕಾಂತ್ ಸರಾಫ್, ನಿತ್ಯಾನಂದ ಬಂಡಿ,ಸುನೀಲ್ ರಾಶೀಂಕರ, ಶ್ರೀ ಶರಣಬಸವೇಶ್ವರ ಸಂಸ್ಥಾನದ ಕಾಯದರ್ಶಿ ಬಸವರಾಜ ದೇಶಮುಖ್, ಅಮರನಾಥ ಪಾಟೀಲ್, ಸಿದ್ದಾಜಿ ಪಾಟೀಲ್, ದಯಾನಂದ ಧಾರವಾಡಕಲ್, ಗಿರಿರಾಜ್ ಯಳಮೇಲಿ ಅವಿನಾಶ್ ರೇವೂರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.