ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, 80 ರ ಹರೆಯಕ್ಕೆ ಕಾಲಿಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಶೇಷ ರೀತಿಯಲ್ಲಿ ಜನ್ಮದಿನದ ಶುಭ ಕೋರಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರಿಗೆ ಮೊಬೈಲ್ ಟಾರ್ಚ್ ಆನ್ ಮಾಡಿ ಶುಭಕೋರಿ ಎಂದು ಮನವಿ ಮಾಡಿದರು. ಅದರಂತೆ ಜನರೂ ಟಾರ್ಚ್ ಹೊತ್ತಿಸಿ ಗೌರವ ಸೂಚಿಸಿದರು.
ಯಡಿಯೂರಪ್ಪ ಅವರ ಸಾಧನೆಗಳ ಬಗ್ಗೆ ಮಾತನಾಡಿದ ಪ್ರಧಾನಿ, ಇಂದು ವಿಮಾನ ನಿಲ್ದಾಣ ಉದ್ಘಾಟನೆಯಲ್ಲದೇ, ಬಿಎಸ್ವೈ ಅವರ ಜನ್ಮದಿನವೂ ಇರುವುದು ವಿಶೇಷ. ರಾಜ್ಯದ ಜನಪ್ರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ದೀರ್ಘಾಯುಷ್ಯರಾಗಿ ಬಾಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ. ಅವರು ಬಡವರ ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ವಿಧಾನಸಭೆಯಲ್ಲಿ ಅವರು ಮಾಡಿದ ವಿದಾಯ ಭಾಷಣ ಸಾರ್ವಜನಿಕರ ಜೀವನದಲ್ಲಿ ನಮ್ಮೆಲ್ಲರಿಗೆ ಸ್ಫೂರ್ತಿದಾಯಕ ಎಂದು ಬಣ್ಣಿಸಿದರು.
ಜೀವನದಲ್ಲಿ ಯಶಸ್ಸು ಸಾಧಿಸಿದ ನಂತರವೂ ವಿನಮ್ರತೆ ಮತ್ತು ಸಹಜವಾಗಿ ಬದುಕುವುದನ್ನು ಯಡಿಯೂರಪ್ಪರಿಂದ ಕಲಿಯಬೇಕು. ಅವರು ಸಾಗಿಬಂದ ಜೀವನ ಮತ್ತು ವಿಧಾನಸಭೆಯಲ್ಲಿ ಅವರ ಭಾಷಣ ನನಗೆ, ಇತರರಿಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ. ಅವರು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕ ಎಂದು ಗುಣಗಾನ ಮಾಡಿದರು.