ಹೊಸದಿಗಂತ ವರದಿ,ವಿಜಯಪುರ:
ವೀರಶೈವ ಲಿಂಗಾಯತ ಸಮಾಜದಲ್ಲಿ ವಿಷಬೀಜ ಬಿತ್ತಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಂಡು ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಬಹುದು ಎಂದು ತಿಳಿದುಕೊಂಡಿದೆ. ಆದರೆ ಸದ್ಯ ಎಲ್ಲ ಸಮುದಾಯದ ಜನರು ಬಿಜೆಪಿ ಪರ ಇದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಹೇಳಿದರು.
ಜಿಲ್ಲೆಯ ಬಸವನಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ. ಬೆಳ್ಳುಬ್ಬಿ ಪರ ಕೊಲ್ಹಾರ ದಲ್ಲಿ ಚುನಾವಣಾ ಪ್ರಚಾರದ ರೋಡ ಶೋ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರಾಹುಲ್ ಗಾಂಧಿ ಪ್ರಾಯಶ್ಚಿತ ಎನ್ನುವಂತೆ ಕೂಡಲಸಂಗಮಕ್ಕೆ ಹೋಗಿ ಬಸವಣ್ಣನವರ ಐಕ್ಯ ಮಂಟಪದಲ್ಲಿ ಪೂಜೆ ಸಲ್ಲಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬಿಜೆಪಿ ಕನಿಷ್ಟ 130-140 ಸ್ಥಾನ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಲ್ಹಾರದಲ್ಲಿ ಬಿಸಿಲನ್ನು ಲೆಕ್ಕಿಸದೆ ಬೆಳ್ಳುಬ್ಬಿ ರೋಡ್ ಶೋದಲ್ಲಿ ಜನ ಪಾಲ್ಗೊಂಡಿದ್ದಾರೆ. ನಿಮ್ಮ ಉತ್ಸಾಹ ನೋಡಿದರೆ ಬೆಳ್ಳುಬ್ಬಿ ಗೆದ್ದು ಬರೋದು ಗ್ಯಾರಂಟಿ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹಲವು ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಈ ಬಾರಿ ಬೆಳ್ಳುಬ್ಬಿ ಗೆಲುವು ಗ್ಯಾರಂಟಿ. ಜನರು ಮೇ 10 ರಂದು ಬಿಜೆಪಿಗೆ ಮತಹಾಕುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.