ಪೊಲೀಸರ ಮೇಲೆ ಕಲ್ಲು ತೂರಾಟ: ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವೈಸಿಪಿ ಕಾರ್ಯಕರ್ತನ ಆತ್ಮಹತ್ಯೆ ವಿರೋಧಿಸಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಕೊವ್ವೂರಿನ ದೊಮ್ಮೇರುವಿನಲ್ಲಿ ತಡರಾತ್ರಿ ನಡೆದ ಘಟನೆಯಿಂದಾಗಿ ಹೆಚ್ಚುವರಿ ಎಸ್ಪಿ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ವೈಸಿಪಿ ಕಾರ್ಯಕರ್ತ ಬೊಂತಾ ಮಹೇಂದರ್ (23) ವೈಸಿಪಿ ಫ್ಲೆಕ್ಸಿ ವಿವಾದದಲ್ಲಿ ಪೊಲೀಸರ ತನಿಖೆಯ ಬಳಿಕ ಕೀಟನಾಶಕ ಸೇವಿಸಿದ್ದರು. ವಿಜಯವಾಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿತ್ತಾದರೂ ಬುಧವಾರದಂದು ಅವರ ಸ್ಥಿತಿ ಹದಗೆಟ್ಟಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಹೇಂದರ್ ಮೃತಪಟ್ಟಿದ್ದರು. ಮಹೇಂದರ್ ಮೃತದೇಹವನ್ನು ರಾತ್ರಿ ವಿಜಯವಾಡದಿಂದ ದೊಮ್ಮೇರುವಿಗೆ ಸ್ಥಳಾಂತರಿಸಲಾಯಿತು.

ಗ್ರಾಮಸ್ಥರು, ಜನಸೇನಾ ಉಸ್ತುವಾರಿ ಹಾಗೂ ಮಾಜಿ ಶಾಸಕ ಟಿ.ವಿ.ರಾಮರಾವ್ ಮೃತದೇಹವನ್ನು ರಸ್ತೆಯಲ್ಲೇ ಇಟ್ಟು ಪ್ರತಿಭಟನೆ ಆರಂಭಿಸಿದರು. ದೊಮ್ಮೇರು ಗ್ರಾಮದ ಕೆಲವರ ಒತ್ತಡಕ್ಕೆ ಮಣಿದು ಪೊಲೀಸರು ಕಿರುಕುಳ ನೀಡಿದ್ದಾರೆಂದು ಗಂಭೀರ ಆರೋಪ ಮಾಡಲಾಯಿತು. ಮಹೇಂದರ್ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಶಿಕ್ಷಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಎಸ್ಪಿ ಪಿ.ಜಗದೀಶ್ ಪರಿಸ್ಥಿತಿ ಅವಲೋಕಿಸಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆ ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕತ್ತಲಲ್ಲಿ ನಡೆದ ಈ ಗಲಾಟೆಯಲ್ಲಿ ಹೆಚ್ಚುವರಿ ಎಸ್ಪಿ ಗೋಗುಲ ವೆಂಕಟೇಶ್ವರ ರಾವ್ ಸೇರಿದಂತೆ ನಾಲ್ವರು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ. ಮಹೇಂದರ್ ಸಾವಿನ ಪ್ರಕರಣದಲ್ಲಿ ಎಸ್‌ಎಸ್‌ಐ ಭೂಷಣ್ ಅವರನ್ನು ಜಿಲ್ಲಾ ಎಸ್ಪಿ ಅಮಾನತುಗೊಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!