ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರೋಜಿನಿ ನಗರದ ಶಾಸಕ ರಾಜೇಶ್ವರ್ ಸಿಂಗ್ ಶನಿವಾರ ವಿಕಲಚೇತನರಿಗೆ ₹ 50 ಲಕ್ಷ ಮೌಲ್ಯದ ಉಪಕರಣಗಳನ್ನು ವಿತರಿಸಿದರು. ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 1000 ದಿವ್ಯಾಂಗರಿಗೆ ಉಪಕರಣಗಳನ್ನು ಉಚಿತವಾಗಿ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ 650 ವಿಶಿಷ್ಟ ಗುರುತಿನ ಚೀಟಿ, 60 ವೈದ್ಯಕೀಯ ಪ್ರಮಾಣ ಪತ್ರ ಹಾಗೂ 800 ಸಹಾಯಕ ಸಾಧನಗಳನ್ನು ಶಾಸಕರು ವಿತರಿಸಿದರು. ನಿರ್ಗತಿಕರಿಗೆ ಕಂಬಳಿಗಳನ್ನು ಸಹ ವಿತರಿಸಲಾಯಿತು, ಭವಿಷ್ಯದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುವ ಭರವಸೆ ಕೂಡ ನೀಡಿದರು.
“ಪ್ರತಿಯೊಬ್ಬ ದಿವ್ಯಾಂಗರ ಮುಖದಲ್ಲಿ ನಗುವನ್ನು ಕಾಣುವುದೇ ನನ್ನ ರಾಜಕೀಯ ಜೀವನದ ಗುರಿ. ಅವರಿಗಾಗಿ ನಾನು ಏನನ್ನಾದರೂ ಮಾಡಲು ಸಿದ್ಧ ಎಂಬುದು ನನಗೆ ತುಂಬಾ ಹೆಮ್ಮೆಯ ವಿಷಯ. ಅವರ ಅದಮ್ಯ ಇಚ್ಛಾಶಕ್ತಿ ಮತ್ತು ಏನನ್ನಾದರೂ ಮಾಡಬೇಕೆಂಬ ಹಂಬಲವು ಇತರರಿಗೆ ಸ್ಫೂರ್ತಿಯಾಗಿದೆ ಮತ್ತು ಜನರಿಗೆ ಜೀವನದಲ್ಲಿ ಹೊಸ ಮಾರ್ಗವನ್ನು ತೋರಿಸುತ್ತದೆ, ”ಎಂದು ಶಾಸಕರು ಹೇಳಿದರು.
“ನಮ್ಮ ಅಂಗವಿಕಲ ಸಹೋದರ ಸಹೋದರಿಯರಿಗೆ ಸ್ವೀಕಾರ, ಬೆಂಬಲ ಮತ್ತು ಸ್ವಾವಲಂಬನೆಯ ಅಗತ್ಯವಿದೆ. ಕರುಣೆ ಅಲ್ಲ,” ಎಂದು ಅವರು ತಿಳಿಸಿದ್ದಾರೆ.
ವಿಕಲಚೇತನರ ನಿರಂತರ ಉನ್ನತಿಗೆ ತಾನು ಬದ್ಧನಾಗಿದ್ದೇನೆ, ಕೇಂದ್ರ ಮತ್ತು ರಾಜ್ಯ ಸರಕಾರ ನೀಡುವ ಕಲ್ಯಾಣ ಯೋಜನೆಗಳ ಲಾಭ ಅವರಿಗೆ ತಲುಪಬೇಕು ಎಂದರು.
2022-23ರಲ್ಲಿ ಉತ್ತರ ಪ್ರದೇಶ ಸರ್ಕಾರವು ‘ದಿವ್ಯಾಂಗಜನ ಕಲ್ಯಾಣ’ಕ್ಕಾಗಿ ₹ 1,000 ಕೋಟಿಯನ್ನು ಮಂಜೂರು ಮಾಡಿದೆ. “ಯೋಗಿ ಸರ್ಕಾರವು ಅಂಗವಿಕಲರಿಗಾಗಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ ಮತ್ತು ಅವರ ಪಿಂಚಣಿಯನ್ನು ಸಹ ಹೆಚ್ಚಿಸಿದೆ. ಇದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಯೊಂದು ಕಲ್ಯಾಣ ಯೋಜನೆಯಲ್ಲಿ ಶೇ 5ರಷ್ಟು ಮೀಸಲಾತಿಯನ್ನು ನಿಗದಿಪಡಿಸಲಾಗಿದೆ,” ಎಂದು ಅವರು ಹೇಳಿದರು.